ಕಡೂರು: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ಬಿರುಬಿಸಿಲಿಗೆ ಜನ ಹೈರಾಣಾಗಿರುವ ಜನರು ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಬರಲೂ ಹಿಂದೇಟು ಹಾಕುತ್ತಾರೆ.
ಗರಿಷ್ಠ ತಾಪಮಾನ 37 ಡಿಗ್ರಿ ದಾಖಲಾಗಿದೆ. ಉಷ್ಣತೆ ಹೆಚ್ಚಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿ ಸಮಸ್ಯೆ ಎದುರಾಗುವ ಸಂಭವವೂ ಹೆಚ್ಚಿದೆ. ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿರುವ ಹಳೆಯ ಕೊಳವೆ ಬಾವಿಗಳಲ್ಲಿ ನೀರಿದ್ದರೂ ಅವುಗಳ ಸಮರ್ಪಕ ಬಳಕೆಗೆ ಪಂಚಾಯಿತಿಗಳು ಮುಂದಾಗಿಲ್ಲ. ಮಚ್ಚೇರಿಯಲ್ಲಿರುವ ಎರಡು ಹಳೆಯ ಕೊಳವೆ ಬಾವಿಗಳನ್ನು ಆಳಗೊಳಿಸಲಾಗಿದೆ.
ಕೆಲವು ಕೊಳವೆಬಾವಿಗಳ ಪೈಪ್ ಹಾಳಾಗಿದ್ದು, ನೀರಿದ್ದರೂ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಪಿಡಿಒಗಳು ನೀರು ಸರಬರಾಜು ಟ್ಯಾಂಕ್ ಸಮೀಪ ಕೊಳವೆ ಬಾವಿ ತೆರೆದರೆ ಅನುಕೂಲ ಎನ್ನುತ್ತಾರೆ. 600 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಹೊಸ ಕೊಳವೆಬಾವಿಗಿಂತ ಹಳೆಯದನ್ನೇ ಸುಸಜ್ಜಿತಗೊಳಿಸುವುದು ಸೂಕ್ತ ಎನ್ನುತ್ತಾರೆ ಸಾರ್ವಜನಿಕರು.
ಕೆಲ ಗ್ರಾಮಗಳಲ್ಲಿ ಇರುವ ತೆರೆದ ಬಾವಿಗಳಲ್ಲಿ ಇಂದಿಗೂ ಸಮೃದ್ಧ ನೀರಿದೆ. ಈ ಬಾವಿಗಳ ನೀರನ್ನು ಜಾನುವಾರುಗಳಿಗೆ ಕುಡಿಯಲು ಉಪಯೋಗಿಸಬಹುದಾಗಿದೆ. ಐದು ವರ್ಷಗಳ ಹಿಂದೆ ಸತತ ಬರಗಾಲದ ಸಮಯದಲ್ಲಿ ಪ್ರತಿ ಗ್ರಾಮದಲ್ಲೂ ಜಾನುವಾರು ತೊಟ್ಟಿ ನಿರ್ಮಿಸಲಾಗಿತ್ತು. ಈಗ ಅವೆಲ್ಲವೂ ನಿರುಪಯುಕ್ತವಾಗಿವೆ. ಇಂತಹ ತೊಟ್ಟಿಗಳಿಗೆ ಈ ಬಾವಿಗಳಿಂದ ಸಣ್ಣ ಮೋಟರ್ ಅಳವಡಿಸಿ ನಿತ್ಯ ನೀರು ತುಂಬಿಸಿದರೆ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬಹುದು. ಯಾರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಮಚ್ಚೇರಿ ಗ್ರಾಮದ ವೆಂಕಟೇಶ್.
ಕೆಲ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಅಧ್ಯಯನಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊಳವೆ ಬಾವಿಗಳನ್ನು ಕೊರೆದಿದೆ. ಅವುಗಳಲ್ಲಿಯೂ ಸಮೃದ್ಧ ನೀರಿದೆ. ಆ ಕೊಳವೆ ಬಾವಿಗಳನ್ನೂ ಸಹ ಬಳಕೆ ಮಾಡಬಹುದು. ಮಚ್ಚೇರಿ ಗ್ರಾಮದ ಶಾಲಾ ಆವರಣದಲ್ಲಿ ಒಂದು ಕೊಳವೆ ಬಾವಿಯಿದೆ. ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಖಾಸಗಿಯವರಿಗೆ ಹಣ ನೀಡಿ ನೀರು ಪಡೆಯಲಾಗುತ್ತಿರುವ ಏಕೈಕ ಗ್ರಾಮ ಮಚ್ಚೇರಿ. ಈ ಕೊಳವೆಬಾವಿ ಬಳಕೆ ಮಾಡಿಕೊಂಡು ಜಲಮೂಲ ಕಂಡುಕೊಳ್ಳಬಹುದು ಎನ್ನುತ್ತಾರೆ ಸ್ಥಳೀಯರೊಬ್ಬರು.
ತಾಲ್ಲೂಕಿನ 23 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಬಹುದೆಂದು ಅಂದಾಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನೂ ತಾಲ್ಲೂಕು ಆಡಳಿತ ಕೈಗೊಂಡಿದೆ. ಆದರೆ ಕೆಲವು ಹಳ್ಳಿಗಳಲ್ಲಿ ಇರುವ ಹಳೆಯ ಬಾವಿಗಳು ಅಥವಾ ಕಲ್ಯಾಣಿಗಳಲ್ಲಿರುವ ನೀರಿನ ಬಳಕೆಗೆ ಮುಂದಾದರೆ ನೀರಿನ ಸಮಸ್ಯೆ ಗಂಭೀರವಾಗಿ ಕಾಡದು ಎಂಬುದು ಜನರ ಅಭಿಪ್ರಾಯವಾಗಿದೆ.
ಗ್ರಾಮಗಳ ತೆರೆದ ಬಾವಿಗಳಲ್ಲಿರುವ ನೀರನ್ನು ಜಾನುವಾರುಗಳಿಗೆ ಉಪಯೋಗಿಸುವ ಮತ್ತು ಅಂತರ್ಜಲ ಅಧ್ಯಯನಕ್ಕಾಗಿ ಕೊರೆದಿರುವ ಕೊಳವೆ ಬಾವಿಗಳನ್ನು ಕುಡಿಯುವ ನೀರಿಗಾಗಿ ಬಳಕೆ ಮಾಡುವ ಕುರಿತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ವರದಿ ಕಳುಹಿಸಿ, ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವು ಎಂದು ತಹಶೀಲ್ದಾರ್ ಎಂ.ಪಿ.ಕವಿರಾಜ್ ಪ್ರತಿಕ್ರಿಯಿಸಿದರು.
ಕೆಲ ಗ್ರಾಮಗಳಲ್ಲಿರುವ ಬಾವಿಗಳಲ್ಲಿರುವ ನೀರನ್ನು ಜಾನುವಾರುಗಳಿಗೆ ಉಪಯೋಗಿಸಲು ಸ್ಥಳೀಯ ಗ್ರಾಮ ಪಂಚಾಯಿತಿಗಳು ಕ್ರಿಯಾ ಯೋಜನೆ ತಯಾರಿಸಿ ನಿರ್ಧಾರ ಕೈಗೊಳ್ಳಬೇಕಿದೆ.ಕೆ.ಆರ್.ಮಹೇಶ್ ಒಡೆಯರ್ ಜಿ.ಪಂ.ಮಾಜಿ ಸದಸ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.