ತರೀಕೆರೆ: ತಾಲ್ಲೂಕಿನ ಭದ್ರಾ ಬಲದಂಡೆ ಕಾಲುವೆ ದುರಸ್ತಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ ಅಸಮಧಾನ ವ್ಯಕ್ತಪಡಿಸಿದರು.
ಇತ್ತೀಚಿಗೆ ಸ್ಥಳೀಯ ಜನಪ್ರತಿನಿಧಿಗಳ ಜತೆ ಕಾಮಗಾರಿ ವೀಕ್ಷಿಸಿದ ಅವರು, ಸರ್ಕಾರ ಸಾವಿರಾರು ಕೋಟಿ ಹಣ ಸದ್ಬಳಕೆಯಾಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ನಾಲೆಯ ಎರಡು ಬದಿಯ ತಡೆ ಗೋಡೆಗಳಿಗೆ ಕಬ್ಬಣದ ರಾಡ್ ಬಳಸದೆ ಬಳಪದ ಕಲ್ಲುಗಳಿಂದ ಗುಣಮಟ್ಟವಿಲ್ಲದ ಮಣ್ಣಿನಿಂದ ಗೋಡೆ ನಿರ್ಮಿಸಿದ್ದು, 2.5 ಸಾವಿರ ಕ್ಯೂಸೆಕ್ ನೀರು ಹರಿದು ಬಂದಲ್ಲಿ ಈ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿಹೋಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಬಾವಿಕೆರೆ ಗ್ರಾಮದ ಬಳಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಎರಡನೇ ಹಂತದ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಅವರು ಎರಡನೇ ಹಂತದ ಯೋಜನೆಗೆ 1322 ಕೋಟಿಹಣವನ್ನು ನೀಡಲಾಗಿದ್ದು, ಇಲ್ಲಿ ಕಾಮಗಾರಿ ಕೂಡ ಸರಿಯಾಗಿ ನಡೆಯುತ್ತಿಲ್ಲ.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯದ ಎಂಜಿನಿಯರಿಂಗ್ ವಿಭಾಗ ಯೋಜನೆ ಜಾರಿಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಗುತ್ತಿಗೆದಾರರ ಮುಂದೆ ಮಂಡಿಯೂರಿ ಕುಳಿತಿದೆ ಎಂದು ಆಪಾದಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಸೀತಾರಾಂ, ಮುಖಂಡ ವೆಂಕಟೇಶ್ ಮತ್ತು ಬಾವಿಕೆರೆ ಗ್ರಾಮಸ್ಥರು ಇದ್ದರು.