ಮಾಗಡಿ: ಗ್ರಾಮೀಣ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಹಕ್ಕಿನಾಳ್ ವೆಂಕಟೇಶ್ ಆಗ್ರಹಿಸಿದರು.
ಗುಡೇಮಾರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ನಡೆದ ವಿಶೇಷ ಮಕ್ಕಳ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆ ವೈದ್ಯರು ಸಕಾಲದಲ್ಲಿ ಸಿಗುವುದಿಲ್ಲ. ತುರ್ತು ಸಮಯದಲ್ಲಿ ಒಬ್ಬ ದಾದಿಯೂ ಇರುವುದಿಲ್ಲ.ಪಶುವೈದ್ಯರು ಆಸ್ಪತ್ರೆಯಲ್ಲಿ ಇರುವುದು ಅಪರೂಪವಾಗಿದೆ. ಜನ ಮತ್ತು ಜಾನುವಾರುಗಳ ಆರೋಗ್ಯ ಸುಧಾರಣೆಗೆ ಪ್ರಥಮ ಆದ್ಯತೆ ನೀಡಲು ಪಂಚಾಯಿತಿ ಮುಂದಾಗಬೇಕು ಎಂದರು.
ಪಿಡಿಒ ಎಸ್.ಆರ್.ನರಸಿಂಹಮೂರ್ತಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಲಾಗಿದೆ ಎಂದರು.
ಎ.ಬಿ.ಜ್ಯೋತಿ ಹೇಮಂತ್ ಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ನಿರ್ಮಲ ಮಾತನಾಡಿದರು.
ಗುಡೇಮಾರನಹಳ್ಳಿ, ಉದ್ದಂಡಹಳ್ಳಿ, ಗರ್ಗೇಶಪುರ, ಹಕ್ಕಿನಾಳ್ ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರಾದ ರಂಗಸ್ವಾಮಿ, ಸಿದ್ದಗಂಗಯ್ಯ, ಶ್ರೀಧರ,ರವಿಕುಮಾರ್, ಎಸ್.ಎನ್.ಜಯರಾಮಯ್ಯ ಮತ್ತು ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು ಗ್ರಾಮಸ್ಥರು, ಶಾಲಾ ಮಕ್ಕಳು ಇದ್ದರು.