ಚಳ್ಳಕೆರೆ:ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಚಳಿಗಾಳಿಗೆ ತಾಲ್ಲೂಕಿನ ಬೊಮ್ಮದೇವರಹಟ್ಟಿ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ 7 ಕುರಿಗಳು ಬಲಿಯಾಗಿವೆ. 10 ಕುರಿಗಳು ನರಳುತ್ತಿವೆ.
ಕುರಿಗಾಹಿ ಪ್ರಹ್ಲಾದ್ ಅವರು ಹುಲ್ಲು, ಮೇವಿಗಾಗಿ ಬೇರೆ ಕಡೆ ವಲಸೆ ಹೋಗುವ ಸಲುವಾಗಿ ನಾಲ್ಕು ದಿನಗಳ ಹಿಂದಷ್ಟೇ ಕುರಿಗಳ ಉಣ್ಣೆಯನ್ನು ಕತ್ತರಿಸಿದ್ದರು. ಚಳಿ ತಾಳಲಾರದೇ ಮೃತಪಟ್ಟಿವೆ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣತಿಳಿಸಿದರು.
ಮಳೆಗಾಲದಲ್ಲಿ ಯಾವುದೇ ಕುರಿಯ ಉಣ್ಣೆಯನ್ನು ಕತ್ತರಿಸಬಾರದು. ಕತ್ತರಿಸಿದರೆ ಮಳೆ ಹಾಗೂ ಚಳಿಗಾಳಿಗೆ ತಾಳಲಾರದೆ ಕುರಿಗಳು ಮೃತಪಡುತ್ತವೆ. 7 ಕುರಿಗಳಿಂದ ₹ 56,000 ನಷ್ಟವಾಗಿದೆ. ಸರ್ಕಾರದ ಅನುಗ್ರಹ ಯೋಜನೆಯಡಿ ಪ್ರತಿ ಕುರಿಗೆ ₹ 5,000 ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.