ಚಿತ್ರದುರ್ಗ: ಇಲ್ಲಿನ ಸೀಬಾರದಲ್ಲಿರುವ ಮೇದಾರ ಕೇತೇಶ್ವರ ಮಠದ ನೂತನ ಪೀಠಾಧಿಪತಿಯಾಗಿ 21ರ ಹರೆಯದ ಬಿ.ಮಂಜುನಾಥ ಅವರು ನೇಮಕಗೊಂಡರು. ಅವರ ಪೂರ್ವಾಶ್ರಮದ ಹೆಸರನ್ನು ಬದಲಿಸಿ ಅಭಿನವ ಬಸವಪ್ರಭು ಸ್ವಾಮೀಜಿ ಎಂದು ಮರುನಾಮಕರಣ ಮಾಡಲಾಯಿತು.
ಹನುಮಂತಯ್ಯ ಕೇತೇಶ್ವರ ಸ್ವಾಮೀಜಿ ಅವರ 30ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನೂತನ ಪೀಠಾಧಿಪತಿಯ ಹೆಸರು ಘೋಷಣೆ ಮಾಡಲಾಯಿತು. ಬಸವಪ್ರಭು ಕೇತೇಶ್ವರ ಸ್ವಾಮೀಜಿ ಲಿಂಗಕ್ಯರಾಗಿದ್ದರಿಂದ 4 ವರ್ಷಗಳಿಂದ ಪೀಠಾಧಿಪತಿ ನೇಮಕ ಆಗಿರಲಿಲ್ಲ.
ಅಖಿಲ ಕರ್ನಾಟಕ ಶ್ರೀಗುರು ಮೇದಾರ ಕೇತೇಶ್ವರ ಟ್ರಸ್ಟ್ ಅಧ್ಯಕ್ಷ ಸಿ.ಪಿ.ಪಾಟೀಲ್ ನೂತನ ಪೀಠಾಧಿಪತಿ ಹೆಸರನ್ನು ಘೋಷಣೆ ಮಾಡಿದರು. ಮಂಜುನಾಥ ಅವರನ್ನೇ ಮುಂದಿನ ಪೀಠಾಧಿಪತಿಯನ್ನಾಗಿ ನೇಮಕ ಮಾಡಬೇಕು ಎಂದು ಬಸವಪ್ರಭು ಕೇತೇಶ್ವರ ಸ್ವಾಮೀಜಿ ಐದು ವರ್ಷಗಳ ಹಿಂದೆ ಬರೆದಿಟ್ಟಿದ್ದ ವಿಲ್ ಓದಿದಾಗ ಭಕ್ತರು ಕರತಾಡನ ಮಾಡಿದರು.
ಬಿಳಿ ಬಟ್ಟೆ ಧರಿಸಿದ್ದ ನೂತನ ಪೀಠಾಧಿಪತಿಗೆ ಎಲ್ಲ ಮಠದ ಸ್ವಾಮೀಜಿಗಳು ರುದ್ರಾಕ್ಷಿ ಮಾಲೆ ಹಾಕಿದರು. ಇಷ್ಟಲಿಂಗ ನೀಡಿ, ಪುಷ್ಪ ವೃಷ್ಟಿ ಮಾಡಿದರು. ಬಳಿಕ ಬಸವಪ್ರಭು ಸ್ವಾಮೀಜಿ ಖಾವಿ ಧರಿಸಿ ವೇದಿಕೆ ಏರಿ ಹಿರಿಯ ಸ್ವಾಮೀಜಿಗಳಿಗೆ ಉದ್ದಂಡ ನಮಸ್ಕಾರ ಮಾಡಿದರು.
ನೂತನ ಪೀಠಾಧಿಪತಿ ನೇಮಕಕ್ಕೆ ಮುರುಘಾ ಮಠದ ಮುರುಘಾ ಶರಣರು ಸಮ್ಮತಿ ನೀಡಿಲ್ಲ. ಅಭಿನವ ಬಸವಪ್ರಭು ಸ್ವಾಮೀಜಿಗೆ ಧೀಕ್ಷೆ ನೀಡುವಂತೆ ಮುರುಘಾ ಶರಣರ ಮನವೊಲಿಸಲು ಎಲ್ಲ ಸ್ವಾಮೀಜಿಗಳು ಸಲಹೆ ನೀಡಿದರು. ಕಾರ್ಯಕ್ರಮಕ್ಕೆ ಮುರುಘಾ ಶರಣರು ಗೈರು ಹಾಜರಾಗಿದ್ದರು.