ಹಿರಿಯೂರು: ‘ತಲೆಬುಡವಿಲ್ಲದ ಗಾಳಿ ಸುದ್ದಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷದ ವರಿಷ್ಠರು ಬಹಳ ಹಿಂದೆಯೇ ಚುನಾವಣಾ ಪ್ರಚಾರ ನಡೆಸಲು ಹಸಿರು ನಿಶಾನೆ ತೋರಿಸಿದ್ದು, ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗುವ ಬಗ್ಗೆ ಯಾವುದೇ ಸಂದೇಹಗಳಿಲ್ಲ’ ಎಂದು ಮಾಜಿ ಸಚಿವ ಡಿ. ಸುಧಾಕರ್ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಕೂನಿಕೆರೆ, ಹುಚ್ಚವ್ವನಹಳ್ಳಿ, ದೊಡ್ಡಘಟ್ಟ ಗ್ರಾಮಗಳಲ್ಲಿ ಭಾನುವಾರ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದ ಅವರು
ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪಕ್ಷಸಂಘಟನೆಗೆ ದುಡಿದವರನ್ನು ಕಾಂಗ್ರೆಸ್ ಎಂದೂ ಕೈಬಿಟ್ಟಿಲ್ಲ. 2018ರ ಚುನಾವಣೆಯಲ್ಲಿ ಸೋತ ನಂತರವೂ ಕ್ಷೇತ್ರ ಬಿಟ್ಟು ಹೋಗದೆ, ಹಿರಿಯೂರಿನಲ್ಲಿ ಮಾಡಿದ್ದ ಮನೆಯಲ್ಲಿಯೇ ವಾಸ್ತವ್ಯ ಮುಂದುವರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಕೋವಿಡ್ ಸಮಯದಲ್ಲಿ ಸಂತ್ರಸ್ತರಿಗೆ ಸಲ್ಲಿಸಿದ ಸೇವೆಯನ್ನು ಜನ ಮರೆತಿಲ್ಲ’ ಎಂದು ಹೇಳಿದರು.
’ನನ್ನ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ. ಹಿಂದಿನ ಮೂರೂವರೆ ವರ್ಷದ ಬಿಜೆಪಿ ಆಡಳಿತದ ಬಗ್ಗೆ ಮತದಾರರಲ್ಲಿ ಬೇಸರ ಮೂಡಿದೆ’ ಎಂದರು.
‘ಹಿರಿಯೂರು ನಗರವೂ ಒಳಗೊಂಡು ಕ್ಷೇತ್ರದ ಯಾವುದೇ ಭಾಗದ ಹಳ್ಳಿಗೆ ಹೋದರೂ ಜನರಿಂದ ಅಭೂತಪೂರ್ವ ಸ್ವಾಗತ ದೊರೆಯುತ್ತಿದೆ. ಇದನ್ನೆಲ್ಲ ಹೈಕಮಾಂಡ್ ನೋಡುತ್ತಿದೆ. ಪ್ರಯುಕ್ತ ಟಿಕೆಟ್ ವಿಷಯಕ್ಕೆ ತಲೆಕೆಡಿಸಿಕೊಳ್ಳದೆ
ಪ್ರಚಾರದಲ್ಲಿ ತೊಡಗಿದ್ದೇನೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.