ಚಳ್ಳಕೆರೆ: ಸತ್ಯ, ನ್ಯಾಯ, ನೀತಿ, ನಿಷ್ಠೆ ಹಾಗೂ ಧರ್ಮದಿಂದ ನಡೆಯುವ ಜನರನ್ನು ಸಮಾಜ ಗೌರವಿಸುವುದರ ಮೂಲಕ ಅವರಿಂದ ಸೇವೆಯನ್ನು ಸದಾ ಬಯಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಜೈನ್ ಟ್ರಸ್ಟ್ನಲ್ಲಿ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಸಮಾಜ ಹಾಗೂ ಮಹಾವೀರ ಸ್ವಾಮಿ ಜೈನ ಶ್ವೇತಾಂಬರ ಮೂರ್ತಿ ಪೂಜಿಕ್ ಸಂಘಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಹಾವೀರ ಸ್ವಾಮಿ ಪೂಜಾ ಕಾರ್ಯಕ್ರಮ ಮತ್ತು ಜನಪ್ರತಿನಿಧಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇತರರಿಗೆ ಒಳಿತನ್ನು ಮಾಡುವುದೇ ನಿಜವಾದ ಧರ್ಮ. ಇದೇ ಬದುಕಿನಲ್ಲಿ ಸರಿಯಾದ ದಾರಿತೋರಿಸುತ್ತದೆ. ಅಹಿಂಸಾ ಪರಮೋಧರ್ಮ ಎಂದು ನಂಬಿ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬರುತ್ತಿರುವ ಜೈನ ಸಮುದಾಯದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಆಯ್ಕೆಯಾಗಿರುವ ಮೂವರು ಶಾಸಕರು ಚಳ್ಳಕೆರೆ ಮೂಲದವರಾಗಿದ್ದು, ಅವರೆಲ್ಲರ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನ ಪಡೆದು ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಎನ್.ಜೆ.ವೆಂಕಟೇಶ್, ಜೈನ ಸಮಾಜದ ತಾಲ್ಲೂಕು ಅಧ್ಯಕ್ಷ ಅಂಬಣ್ಣ, ಕಾರ್ಯಧ್ಯಕ್ಷ ಪ್ರಭಾಕರ್, ಸಮುದಾಯದ ಹಿರಿಯ ಮುಖಂಡ ಭರತ್ರಾಜ್ ಮಾತನಾಡಿದರು.
ವೈದ್ಯ ಡಾ.ವಿಜಯೇಂದ್ರ, ಡಿ.ಪಾಶ್ವನಾಥ ಗೌರೀಪುರ, ಚಂಪಾಲಾಲ್, ಕುಂದನ್ ನವೀನ್, ರಾಜೇಶ್, ಹರ್ಷಿಣಿ ಡಿ.ಸುಧಾಕರ್, ಪರಶುರಾಂಪುರ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.