ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಪಾಲವ್ವನಹಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸೆರೆಸಿಕ್ಕಿದ್ದ ಚಿರತೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.
ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಬುಧವಾರ ಸುಟ್ಟುಹಾಕಲಾಯಿತು.
5ರಿಂದ 7 ವರ್ಷದ ಈ ಗಂಡು ಚಿರತೆ ಪಾಲವ್ವನಹಳ್ಳಿಯ ಹೊರವಲಯದಲ್ಲಿ ಜುಲೈ 25ರಂದು ಸೆರೆಸಿಕ್ಕಿತ್ತು. ಬೆನ್ನುಹುರಿಯಲ್ಲಿ ಬಲವಾದ ಗಾಯವಾಗಿದ್ದರಿಂದ ಮೇಲೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆಹಾರ, ನೀರು ಇಲ್ಲದೆ ನಿತ್ರಾಣಗೊಂಡಿದ್ದ ಇದಕ್ಕೆ ಒಂದು ವಾರದಿಂದ ಚಿಕಿತ್ಸೆ ನೀಡಲಾಗಿತ್ತು.
‘ಮರ ಅಥವಾ ಕಲ್ಲು ಬಂಡೆಯಿಂದ ಜಿಗಿದ ಸಂದರ್ಭದಲ್ಲಿ ಬೆನ್ನುಹುರಿಗೆ ಧಕ್ಕೆ ಉಂಟಾಗಿರಬಹುದು. ಚಿರತೆಗಳ ನಡುವೆ ಸರಹದ್ದಿಗಾಗಿ ನಡೆದ ಕಾದಾಟದಲ್ಲೂ ಇದು ಗಾಯಗೊಂಡಿರುವ ಸಾಧ್ಯತೆ ಇದೆ. ಆಹಾರ ಸೇವಿಸಿದರೂ ಮಲ ವಿಸರ್ಜನೆ ಮಾಡುತ್ತಿರಲಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ನಿಖರ ಕಾರಣ ಗೊತ್ತಾಗಲಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ತಿಳಿಸಿದರು.