ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ ಕೋವಿಡ್ಗೆ ಲಸಿಕೆ ಪಡೆದ 17 ಜನರಲ್ಲಿ ವಾಂತಿ, ಮೈಕಡಿತ ಕಂಡುಬಂದಿದ್ದು, ಚಿಕಿತ್ಸೆಯ ಬಳಿಕ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಗಂಭೀರ ಸ್ವರೂಪದ ಅಡ್ಡಪರಿಣಾಮ ಯಾರಲ್ಲೂ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೋವಿಡ್ಗೆ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿದೆ. ಲಸಿಕೆ ಅಭಿಯಾನ ಜ.16ರಿಂದ ಆರಂಭವಾಗಿದ್ದು, ಜಿಲ್ಲೆಯಲ್ಲಿ 4,826 ಕೊರೊನಾ ವಾರಿಯರ್ಗಳಿಗೆ ಲಸಿಕೆ ನೀಡಲಾಗಿದೆ. ಸೋಮವಾರ ಲಸಿಕೆ ಪಡೆದ ಕೆಲವರಲ್ಲಿ ಮಾತ್ರ ಜ್ವರ ಸೇರಿದಂತೆ ಇತರ ಸಮಸ್ಯೆಗಳು ಕಾಣಿಸಿಕೊಂಡಿವೆ.
ಚಿತ್ರದುರ್ಗದ ಬುದ್ಧ ನಗರದಲ್ಲಿ ಲಸಿಕೆ ಪಡೆದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ವಿಶ್ರಾಂತಿ ಕೊಠಡಿಗೆ ಸ್ಥಳಾಂತರಗೊಂಡ ಬಳಿಕ ದೇಹದಲ್ಲಿ ವೈಪರಿತ್ಯಗಳು ಉಂಟಾಗಿವೆ. ನಾಲ್ವರಲ್ಲಿ ಜ್ವರ ಹಾಗೂ ಸುಸ್ತು ಕಾಣಿಸಿಕೊಂಡಿದೆ. ತಕ್ಷಣ ಚಿಕಿತ್ಸೆ ನೀಡಿದ ವೈದ್ಯರು ಆತಂಕಗೊಳ್ಳದಂತೆ ಧೈರ್ಯ ತುಂಬಿದ್ದಾರೆ. ಕೆಲ ಗಂಟೆಗಳ ಕಾಲ ಆರೋಗ್ಯ ಸಹಜ ಸ್ಥಿತಿಗೆ ಮರಳಿದ್ದು, ಎಲ್ಲರನ್ನೂ ಮನೆಗೆ ಕಳುಹಿಸಲಾಗಿದೆ.
ಸೋಮವಾರ ಜಿಲ್ಲೆಯ 96 ಕೇಂದ್ರಗಳಲ್ಲಿ 6,550 ಸಿಬ್ಬಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಈ ಪೈಕಿ 4,826 ಮಂದಿಗೆ ಲಸಿಕೆ ಹಾಕಲಾಗಿದ್ದು, ಶೇ 73.68ರಷ್ಟು ಸಾಧನೆ ಮಾಡಲಾಗಿದೆ. ಆರೋಗ್ಯ ಇಲಾಖೆ, ಖಾಸಗಿ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಲಸಿಕೆ ಪಡೆದಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ 22 ಕೇಂದ್ರಗಳಲ್ಲಿ 1,066 ಆರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ. ಚಳ್ಳಕೆರೆ ತಾಲ್ಲೂಕಿನ 18 ಕೇಂದ್ರಗಳಲ್ಲಿ 826 ಸಿಬ್ಬಂದಿ, ಹಿರಿಯೂರು ತಾಲ್ಲೂಕಿನ 23 ಕೇಂದ್ರಗಳಲ್ಲಿ 1,081 ಸಿಬ್ಬಂದಿ, ಹೊಳಲ್ಕೆರೆ ತಾಲ್ಲೂಕಿನ 15 ಕೇಂದ್ರಗಳಲ್ಲಿ 800 ಸಿಬ್ಬಂದಿ, ಹೊಸದುರ್ಗ ತಾಲ್ಲೂಕಿನ 12 ಕೇಂದ್ರಗಳಲ್ಲಿ 793 ಸಿಬ್ಬಂದಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನ 6 ಕೇಂದ್ರಗಳಲ್ಲಿ 260 ಕೊರೊನಾ ವಾರಿಯರ್ಗಳು ಲಸಿಕೆ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ ಲಸಿಕೆ ಪಡೆದ 17 ಜನರಲ್ಲಿ ವಾಂತಿ, ಮೈಕಡಿತ ಕಂಡುಬಂದಿತ್ತು. ಕೆಲ ಹೊತ್ತಿನ ಬಳಿಕ ಗುಣಮುಖರಾಗಿದ್ದಾರೆ. ಯಾವುದೇ ತರಹದ ಅಡ್ಡಪರಿಣಾಮ ಉಂಟಾಗಿಲ್ಲ.
–ಡಾ.ಚಂದ್ರಶೇಖರ್ ಕಂಬಾಳಿಮಠ್
ವಾರ್ ರೂಂ ನೋಡಲ್ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.