ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಕರ ಅಪಘಾತ: ಲಾರಿ ಭಸ್ಮ; ದ್ವಿಚಕ್ರ ವಾಹನ ಸವಾರ ಸಾವು

Last Updated 11 ನವೆಂಬರ್ 2021, 15:33 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ತೋಪುರಮಾಳಿಗೆ ಸಮೀಪದ ಚಿತ್ರದುರ್ಗ –ಚಳ್ಳಕೆರೆ ರಸ್ತೆಯಲ್ಲಿ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಲಾರಿಗೆ ಬೆಂಕಿ ತಗುಲಿ ಭಸ್ಮವಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳು ಗ್ರಾಮದ ರಂಗಪ್ಪ (60) ಮೃತಪಟ್ಟವರು. ಜೋಗಿಮಟ್ಟಿ ರಸ್ತೆ ನಿವಾಸಿ ಹನುಮಂತಪ್ಪ ಗಂಭೀರವಾಗಿ ಗಾಯಗೊಂಡಿದ್ದು ದಾವಣಗೆರೆ ಎಸ್‌.ಎಸ್‌.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿತ್ರದುರ್ಗದಿಂದ ಚಳ್ಳಕೆರೆಗೆ ಸಾಗುತ್ತಿದ್ದ ಲಾರಿ ಹಾಗೂ ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಲಾರಿಯ ಚಕ್ರದಡಿ ಸಿಲುಕಿದ ದ್ವಿಚಕ್ರ ವಾಹನ ನೆಲಕ್ಕೆ ಉಜ್ಜಿದೆ. ಪೆಟ್ರೋಲ್‌ ಟ್ಯಾಂಕ್‌ ತೆರೆದು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಲಿಬಿಲಿಗೊಂಡ ಚಾಲಕ ಲಾರಿ ನಿಲುಗಡೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಸವಾರರು ರಸ್ತೆಯಲ್ಲಿ ಬಿದ್ದಿದ್ದು, ಒಬ್ಬರ ಕಾಲುಗಳು ತುಂಡಾಗಿದ್ದವು. ಈ ಭೀಕರ ಅಪಘಾತ ಸಾರ್ವಜನಿಕರಲ್ಲಿ ಭೀತಿಯುಂಟು ಮಾಡಿದೆ.

ಟೈರುಗಳಿಗೆ ಹೊತ್ತಿಕೊಂಡ ಬೆಂಕಿ ಇಡೀ ಲಾರಿಗೆ ವ್ಯಾಪಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿ ಬೆಂಕಿ ನಂದಿಸಿದರು. ಅಪಘಾತ ಸಂಭವಿಸಿದ್ದರಿಂದ ಚಳ್ಳಕೆರೆ–ಚಿತ್ರದುರ್ಗ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಸಂಚಾರ ಸಮಸ್ಯೆ ನಿವಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT