ಚಿತ್ರದುರ್ಗ: ಪೌಷ್ಟಿಕಾಂಶವುಳ್ಳ ಗೀರ್ ದೇಸಿ ಹಸುವಿನ ಹಾಲು ಸಿಗುವುದು ಅಪರೂಪ. ಇಂತಹ ಶುದ್ಧ ಹಾಲನ್ನು ಗ್ರಾಹಕರಿಗೆ ನೇರವಾಗಿ ಗೋ ಪಾಲಕರಿಂದ ತಲುಪಿಸುವ ಪ್ರಯತ್ನ ನಗರದಲ್ಲಿ ಆರಂಭವಾಗಲಿದೆ.
ಜುಲೈ 11ರಂದು ನಗರದ ಜೆಸಿಆರ್ ಮುಖ್ಯ ರಸ್ತೆಯ ಸಾಯಿಬಾಬಾ ದೇಗುಲ ಆವರಣದ ‘ದುರ್ಗಾಂಬಾಮೃತ ಎ2 ಮಿಲ್ಕ್’ ಹೆಸರಿನಲ್ಲಿ ಹಾಲಿನ ಮಾರಾಟ ಕೇಂದ್ರ ಆರಂಭವಾಗುತ್ತಿದೆ.
‘ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸೇರಿ ಜಿಲ್ಲೆಯ ಗೀರ್ ಹಸು ಸಾಕಣೆ ತಂಡದ 10 ಸದಸ್ಯರು ಗೋ ಪಾಲನೆಯಲ್ಲಿ ತೊಡಗಿದ್ದು, ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಸದ್ಯ ಇದು ಜಿಲ್ಲೆಯ ಏಕೈಕ ಮಾರಾಟ ಕೇಂದ್ರವಾಗಿದೆ’ ಎಂದು ತಂಡದ ಸದಸ್ಯ ನಾಗರಾಜ್ ಭಟ್ ತಿಳಿಸಿದ್ದಾರೆ.
ಗೀರ್ ಹಾಲಿನ ಜೊತೆಗೆ ಇತರ ಉತ್ಪನ್ನಗಳಾದ ತುಪ್ಪ, ಹಾಲು ಹಾಗೂ ಸಿಹಿ ತಿನಿಸುಗಳು ದೊರೆಯಲಿವೆ. ತಂಡದಲ್ಲಿ ಶಾಸಕರನ್ನು ಒಳಗೊಂಡು ಜ್ಞಾನೇಶ್, ನಾಗರಾಜ್, ಮನು, ರಾಜಣ್ಣ, ಕುಲಕರ್ಣಿ, ದಶರಥ, ಸತೀಶ್ ಒಗ್ಗೂಡಿ ಇದಕ್ಕೆ ಕೈಹಾಕಿದ್ದಾರೆ.
‘ಗೀರ್ ಹಸುಗಳ ಸಾಕಣೆ ಜಿಲ್ಲೆಯಲ್ಲಿ ಈಚೆಗೆ ಹೆಚ್ಚುತ್ತಿದೆ. ಈ ಹಾಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಶುದ್ಧ ಹಾಲನ್ನೇ ಗ್ರಾಹಕರಿಗೆ ನೀಡಲಾಗುವುದು’ ಎಂದು ತಂಡದ ಸದಸ್ಯರು ಭರವಸೆನೀಡಿದ್ದಾರೆ.