ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ| ಚುನಾವಣಾ ಕರ್ತವ್ಯಕ್ಕೆ ಗೈರಾದರೆ ಶಿಸ್ತುಕ್ರಮ: ದಿವ್ಯಪ್ರಭು

ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಸೂಚನೆ
Last Updated 29 ಮಾರ್ಚ್ 2023, 6:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಯಾವುದೇ ಸಮಸ್ಯೆ ಇಲ್ಲದಂತೆ ಯಶಸ್ವಿಗೊಳಿಸಬೇಕು. ಆದ್ದರಿಂದ ಚುನಾವಣಾ ಕರ್ತವ್ಯಕ್ಕೆ ಯಾವುದೇ ಕಾರಣಕ್ಕೂ ಗೈರಾಗಬಾರದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ. ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಚುನಾವಣಾ ತರಬೇತಿ ನಿರ್ವಹಣಾ ಕೋಶದ ಅಡಿಯಲ್ಲಿ ಆಯೋಜಿಸಿದ್ದ ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ‘ಚುನಾವಣಾ ಕಾರ್ಯದಲ್ಲಿ ಯಾವುದೇ ದೂರುಗಳು ಬಾರದಂತೆ, ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯದಲ್ಲಿ ಅಶಿಸ್ತು ಕಂಡುಬಂದಲ್ಲಿ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

‘ಚುನಾವಣೆ ಕಾರ್ಯದಲ್ಲಿ ವಿವಿಧ ತಂಡಗಳ ಪಾತ್ರ ಏನು ಎಂಬುದನ್ನು ಪ್ರತಿಯೊಬ್ಬರೂ ತಿಳಿದು
ಕೊಳ್ಳಬೇಕು. ಮುಕ್ತ, ನ್ಯಾಯಸಮ್ಮತ, ಗೊಂದಲವಿಲ್ಲದೆ, ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನ ತಂಡದ ಪಾತ್ರ ಪ್ರಮುಖವಾಗಿದೆ. ಇದರ ಅಡಿಯಲ್ಲಿ ಸಂಚಾರಿ ಹಾಗೂ ಸ್ಥಿರ ಕಣ್ಗಾವಲು ತಂಡಗಳು ಕಾರ್ಯನಿರ್ವಹಿಸುತ್ತವೆ’ ಎಂದು ತಿಳಿಸಿದರು.

‘ಸಂಚಾರಿ ಹಾಗೂ ಸ್ಥಿರ ಕಣ್ಗಾವಲು ಹಾಗೂ ಸೆಕ್ಟರ್‌ ಅಧಿಕಾರಿಗಳಿಗೆ ಸಿಆರ್‌ಪಿಸಿ 103ರ ಅಡಿ ಕಾರ್ಯನಿರ್ವಾಣ ದಂಡಾಧಿಕಾರಿಯ ಅಧಿಕಾರ ನೀಡಲಾಗಿದೆ. ಚುನಾವಣಾ ಅಕ್ರಮಗಳು ಕಂಡುಬಂದರೆ ಅವುಗಳನ್ನು ತಡೆಯಲು ಶೋಧನೆ ಹಾಗೂ ವಸ್ತುಗಳನ್ನು ಜಪ್ತಿ ಮಾಡಬಹುದು’ ಎಂದು
ವಿವರಿಸಿದರು.

‘ಜಿಲ್ಲೆಯು ನೆರೆಯ ರಾಜ್ಯದ ಅನಂತಪುರ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿದೆ. 8 ಅಂತರ ರಾಜ್ಯ ಸೇರಿದಂತೆ ಒಟ್ಟು 35 ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ. ವಿಡಿಯೊಗ್ರಾಫರ್‌ಗಳಿಗೆ ಪ್ರತ್ಯೇಕ ತರಬೇತಿ ನೀಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ.ಎಸ್‌. ದಿವಾಕರ್‌ ಮಾತನಾಡಿ, ‘ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ಕರ್ತವ್ಯಗಳು, ಜವಾಬ್ದಾರಿಗಳು, ಮಾದರಿ ನೀತಿ ಸಂಹಿತೆ ಕುರಿತು ಆರ್‌.ಒ, ಎಆರ್‌ಒ, ಸೆಕ್ಟರ್‌ ಅಧಿಕಾರಿಗಳು ಸೇರಿದಂತೆ ವಿವಿಧ ತಂಡಗಳಿಗೆ ತರಬೇತಿ ನೀಡಲಾಗುತ್ತಿದೆ. ಎಲ್ಲರೂ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯದ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದು, ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ಮಾತನಾಡಿ, ‘ಚುನಾವಣಾ ಯಶಸ್ಸಿನಲ್ಲಿ ಅಧಿಕಾರಿಗಳ ಕರ್ತವ್ಯ ಪ್ರಮುಖವಾಗಿದೆ. ಏಕಗವಾಕ್ಷಿ ಯೋಜನೆಯ ಅಡಿ ಎಲ್ಲ ಪಕ್ಷಗಳು ಸಭೆ, ಸಮಾರಂಭ, ರ‍್ಯಾಲಿ, ಮೆರವಣಿಗೆ ನಡೆಸಲು ಅನುಮತಿ ಪಡೆಯಲು ಅರ್ಜಿ ಸಲ್ಲಿಸುತ್ತಾರೆ. ಇವುಗಳನ್ನು ನಿಷ್ಪಕ್ಷಪಾತವಾಗಿ ಮೊದಲು ಬಂದವರಿಗೆ ಆದ್ಯತೆ ಮೇಲೆ ಅನುಮತಿ ನೀಡಬೇಕು’ ಎಂದು ತಿಳಿಸಿದರು.

ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್‌ ಅಧಿಕಾರಿ ಎನ್‌. ರಾಜು ಮಾತನಾಡಿ, ‘ಜಿಲ್ಲಾ ಮಟ್ಟದಲ್ಲಿ ಎರಡು ತರಬೇತಿ ಹಾಗೂ ರಾಜ್ಯ ಚುನಾವಣಾ ಆಯುಕ್ತರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಒಂದು ಬಾರಿ ತರಬೇತಿ ನೀಡಿದ್ದಾರೆ. ಹೆಚ್ಚುವರಿಯಾಗಿ ವಿಶೇಷವಾಗಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ತಂಡಗಳಿಗೆ ತರಬೇತಿ ನೀಡಲಾಗುತ್ತಿದೆ’
ಎಂದರು. ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಎನ್‌.ವಿ. ಶಿರಗಾಂವಕರ್‌ ತರಬೇತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ಆರ್‌.ಚಂದ್ರಯ್ಯ, ಚುನಾವಣಾಧಿಕಾರಿಗಳಾದ ರಮೇಶ್‌ ಕುಮಾರ್‌, ಆನಂದ್‌, ತಿಮ್ಮಪ್ಪ, ಮಹೇಂದ್ರ ಕುಮಾರ್‌, ವಿವೇಕಾನಂದ, ಚುನಾವಣಾ ವೆಚ್ಚದ ನೋಡಲ್‌ ಅಧಿಕಾರಿ ಮಧುಸೂಧನ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಸ್ವಾಮಿ ಇದ್ದರು.

............

ಮತದಾರರ ಓಲೈಕೆಗೆ ಕಾನೂನು ಬಾಹಿರವಾಗಿ ಹಣ, ವಸ್ತುಗಳನ್ನು ಹಂಚುವುದನ್ನು ತಡೆಯುವುದು ಸವಾಲಿನ ಕೆಲಸವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 35 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಹಣ, ಮದ್ಯ ಹಾಗೂ ಜನರಿಗೆ ಹಂಚಲು ತಂದ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ.

– ದಿವ್ಯಪ್ರಭು ಜಿ.ಆರ್‌.ಜೆ., ಜಿಲ್ಲಾಧಿಕಾರಿ

...........

ಘರ್ಷಣೆ ನಡೆಯುವುದನ್ನು ತಪ್ಪಿಸಿ

ಸಮಾವೇಶಗಳ ಸ್ಥಳ ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಮಯ ಹಂಚಿಕೆಯಲ್ಲಿ ಗೊಂದಲ ಉಂಟಾಗಿ ಘರ್ಷಣೆಗಳು ನಡೆಯವುದನ್ನು ತಪ್ಪಿಸಬೇಕು. ಇದಕ್ಕಾಗಿ ನೇಮಿಸಿದ ಪೊಲೀಸ್‌ ನೋಡಲ್‌ ಅಧಿಕಾರಿಗಳೊಂದಿಗೆ ಮ್ಯಾಜಿಸ್ಟ್ರೇಟ್‌ ಹಾಗೂ ಚುನಾವಣೆ ಅಧಿಕಾರಿಗಳು ಸಮಾಲೋಚನೆ ನಡೆಸಬೇಕು. ಚುನಾವಣೆ ಅಕ್ರಮ, ಜಪ್ತಿಗೆ ಸಂಬಂಧಿಸಿ ಸಂಚಾರಿ ಹಾಗೂ ಸ್ಥಿರ ಕಣ್ಗಾವಲು ಹಾಗೂ ಸೆಕ್ಟರ್‌ ಅಧಿಕಾರಿಗಳೇ ಸ್ಪಷ್ಟವಾಗಿ ದೂರು ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT