ನಾಯಕನಹಟ್ಟಿ: ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ದೊಡ್ಡ ಕಾರ್ತಿಕೋತ್ಸವ ಶುಕ್ರವಾರ ಸಡಗರದಿಂದ ನಡೆಯಿತು.
ಶುಕ್ರವಾರ ಬೆಳಿಗ್ಗೆಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ ರಥವನ್ನು ಸಿಂಗಾರ ಮಾಡಲಾಗಿತ್ತು. ಮಧ್ಯಾಹ್ನ 3ಕ್ಕೆ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಸಕಲ ಪೂಜಾ ವಿಧಿವಿಧಾನಗಳಿಂದ ಪ್ರತಿಷ್ಠಾಪಿಸಿ ರಥಕ್ಕೆ ಚಾಲನೆ ನೀಡಲಾಯಿತು.
ಭಕ್ತರು ಸಂಭ್ರಮದಿಂದ ರಥವನ್ನು ಎಳೆದರು. ರಥ ಸಾಗುವ ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಬಾಳೆಹಣ್ಣು, ಕಾಳುಮೆಣಸು, ಬೆಲ್ಲದ ಚೂರನ್ನು ರಥಕ್ಕೆ ಹಾಕಿ ಹರಕೆ ಪೂರೈಸಿದರು. ಪಂಜು, ಕರಡಿ ಮಜಲು, ಡೊಳ್ಳು ವಾದ್ಯ ಹಾಗೂ ನಂದಿಕೋಲು ಕುಣಿತ ಆಕರ್ಷಿಸಿತು.
ರಥ ಸಾಗುತ್ತ ವೀರಭದ್ರನ ಓಣಿಗೆ ಬಂದಾಗ ಹರಕೆ ಹೊತ್ತ ನೂರಾರು ಯುವಕರು ಬೆಳಿಗ್ಗೆಯಿಂದಲೇ ಉಪವಾಸ ವ್ರತ ಕೈಗೊಂಡಿದ್ದರು. ಯುವಕರು ಶಸ್ತ್ರ ಪೂಜಾ ವಿಧಿಗಳನ್ನು ಕೈಗೊಂಡು, ಚೂಪಾದ ಪಂಚಲೋಹದ ಕಡ್ಡಿಗಳನ್ನು ಬಾಯಿಗೆ ಸಿಕ್ಕಿಸಿಕೊಂಡು ವೀರಭದ್ರ ಕುಣಿತ ಪ್ರದರ್ಶಿಸಿದರು.
ನಂತರ ಸಂಜೆ ಸಕಲ ಬಿರುದಾವಳಿಗಳಿಂದ ದೇವರನ್ನು ಗುಡಿದುಂಬಿಸಲಾಯಿತು. ನಂತರ ನೆರೆದ ಭಕ್ತರೆಲ್ಲರಿಗೂ ವಿಶೇಷವಾದ ಸಜ್ಜೆ ಮತ್ತು ಕಡ್ಲೆಕಾಳು ಮೊಳಕೆಯನ್ನು ಪ್ರಸಾದವಾಗಿ ವಿತರಿಸಿದರು. ಉತ್ಸವಕ್ಕೆ ಜನಪದ ಕಲಾತಂಡಗಳಾದ ಕೋಲಾಟ, ಬೊಂಬೆ ಕುಣಿತ, ಮೆರುಗು ಹೆಚ್ಚಿಸಿದವು.