ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೊತ್ತು. ಅವರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಕ್ಷುಲ್ಲಕ ವಿಚಾರದಲ್ಲಿ ವಿವಾದ ಸೃಷ್ಟಿಸುವುದನ್ನು ಕಾಂಗ್ರೆಸ್ ಬಿಡಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
‘ಮೋದಿ ಬತ್ತಳಿಕೆಯಲ್ಲಿ ಸುಳ್ಳಿನ ಬಾಣಗಳು ಖಾಲಿಯಾಗಿವೆ’ ಎಂಬ ಕಾಂಗ್ರೆಸ್ ಆರೋಪಕ್ಕೆ ಸೋಮಣ್ಣ ತಿರುಗೇಟು ನೀಡಿದರು.
‘ಪ್ರಧಾನಿ ಮೋದಿ ಬಗ್ಗೆ ಆರೋಪ ಮಾಡಲು ಕಾಂಗ್ರೆಸ್ ಬಳಿ ಯಾವುದೇ ವಿಷಯ ಇಲ್ಲ. ಏಳು ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. ರಾಷ್ಟ್ರೀಯ ಪಕ್ಷವನ್ನು ಪ್ರತಿನಿಧಿಸುವ ನಾಯಕರು ಕ್ಷುಲ್ಲಕವಾಗಿ ಮಾತನಾಡಬಾರದು’ ಎಂದು ಹೇಳಿದರು.
‘ಕೋವಿಡ್ ಕರ್ನಾಟಕಕ್ಕೆ ಮಾತ್ರ ಬಂದಿಲ್ಲ. ಇಡೀ ವಿಶ್ವಕ್ಕೆ ವ್ಯಾಪಿಸಿದೆ. ಭಾರತದಲ್ಲಿ ಕೋವಿಡ್ ಸಮರ್ಥವಾಗಿ ಎದುರಿಸಲಾಗುತ್ತಿದೆ. ಜನಾಶೀರ್ವಾದ ಯಾತ್ರೆಯ ಬಗ್ಗೆ ಮಾತನಾಡುವ ಕಾಂಗ್ರೆಸ್, ತನ್ನ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುತ್ತಿಲ್ಲವೇ’ ಎಂದು ಪ್ರಶ್ನಿಸಿದರು.
***
ಸಚಿವ ಆನಂದ್ ಸಿಂಗ್ ಎಳೆ ಮಗು ಇದ್ದ ಹಾಗೆ. ಅವರಿಗೆ ಯಾವುದೇ ಮುನಿಸಿಲ್ಲ. ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದಾರೆ. ಜನಾರ್ದನರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ನಾಯಕರು ತೀರ್ಮಾನಿಸುತ್ತಾರೆ.
- ವಿ.ಸೋಮಣ್ಣ,ವಸತಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.