ಚಿತ್ರದುರ್ಗ: ‘ಡ್ರಗ್ಸ್ ದಂಧೆ 25 ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಯಾವ ಸರ್ಕಾರಕ್ಕೂ ಸಾಧ್ಯವಾಗಿಲ್ಲ. ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸುವುದು ಸೂಕ್ತ’ ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಒತ್ತಾಯಿಸಿದರು.
ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಡ್ರಗ್ಸ್ ದಂಧೆ ಹಿಂದಿನಿಂದಲೂ ಇದೆ. ಬಡವರ ಮಕ್ಕಳು ಡ್ರಗ್ಸ್ ಸೇವಿಸುವುದಿಲ್ಲ. ಶ್ರೀಮಂತರ ಮಕ್ಕಳೇ ಇದರ ದಾಸರಾಗುತ್ತಾರೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಪೊಲೀಸರಿಗೆ ಗೊತ್ತಿಲ್ಲದೇ ದಂಧೆ ನಡೆಯಲು ಸಾಧ್ಯವಿಲ್ಲ. ಮುಂಬೈನಿಂದ ಆರಂಭವಾದ ತನಿಖೆ ಬೆಂಗಳೂರಿಗೆ ಬಂದು ತಲುಪಿದೆ. ಇದನ್ನು ಸಿಸಿಬಿ ನಿಭಾಯಿಸುವುದ ಕಷ್ಟ’ ಎಂದರು.
‘ನಾನು ಕೂಡ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಸಿನಿಮಾ ರಂಗದೊಂದಿಗಿನ ನಂಟು ತಪ್ಪಲ್ಲ. ರಾಜಕಾರಣಿಗಳಾರು ಡ್ರಗ್ಸ್ ಸೇವನೆ ಮಾಡುವುದಿಲ್ಲ. ಕುತೂಹಲಕ್ಕೆ ವಿದೇಶದ ಕ್ಯಾಸಿನೋವಾಗೆ ಭೇಟಿ ನೀಡಿದ್ದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.