ಮೊಳಕಾಲ್ಮುರು: ‘ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸೇರಿದಂತೆ ಅನೇಕ ಯಡವಟ್ಟುಗಳನ್ನು ಮಾಡಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು’ ಎಂದು ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಪಿ.ಎಂ. ಮಂಜುನಾಥ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಹಿಂದಿನಿಂದಲೂ ಶಿಕ್ಷಕರು ಬಿಜೆಪಿ ಪರವಾಗಿ ಮತ ಹಾಕಿದ್ದಾರೆ, ಪಕ್ಷವೂ ಶಿಕ್ಷಕರ ಹಿತ ಕಾಪಾಡಿಕೊಂಡು ಬಂದಿದೆ. ಮೂಗಿಗೆ ತುಪ್ಪ ಸವರುವ ಕೆಲಸವನ್ನು ಎಂದಿಗೂ ಬಿಜೆಪಿ ಮಾಡಿಲ್ಲ. ಕಾಂಗ್ರೆಸ್ ನೀಡುತ್ತಿರುವ ಸುಳ್ಳು ಭರವಸೆಗಳಿಗೆ ಮರುಳಾಗದೇ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರಿಗೆ ಮತ ಹಾಕಬೇಕು’ ಎಂದರು.
ಮುಖಂಡರಾದ ಜಿಂಕಲು ಬಸವರಾಜ್, ಕೆ.ಟಿ. ಶ್ರೀರಾಮರೆಡ್ಡಿ, ಆರ್. ರಾಮರೆಡ್ಡಿ, ಮೊಗಲಹಳ್ಳಿ ಸಿದ್ಧಾರ್ಥ್, ಮಹೇಶ್, ಕೃಷ್ಣಪ್ಪ, ಜೀರಹಳ್ಳಿ ತಿಪ್ಪೇಸ್ವಾಮಿ, ಪಿ. ಲಕ್ಷ್ಮಣ್, ವಕೀಲ ಶಿವು, ಡಿಶ್ ರಾಜು ಇದ್ದರು.