ಚಿತ್ರದುರ್ಗ: ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಕೇಂದ್ರದ ‘ಒಬಿಸಿ’ ಪಟ್ಟಿಯಲ್ಲಿ ಸೇರಿಸುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಲು ಒತ್ತಾಯಿಸಬೇಕು. ಅದಕ್ಕಾಗಿ ಎಲ್ಲಾ ಮಠಾಧೀಶರು ಇದಕ್ಕೆ ಸಹಕಾರ ನೀಡಬೇಕು ಎಂದು ಭಾನುವಾರ ಚರ್ಚಿಸಲಾಯಿತು.
ಇಲ್ಲಿನ ಮಾದಾರ ಚನ್ನಯ್ಯ ಗುರುಪೀಠದಲ್ಲಿ ನಡೆದ ಮಠಾಧೀಶರ ಸಭೆಯಲ್ಲಿ ‘ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರೂ ನಮ್ಮ ಹೋರಾಟಕ್ಕೆ ಬೆಂಬಲ, ಸಹಕಾರ ನೀಡಬೇಕು’ ಎಂದು ಹಲವು ಸ್ವಾಮೀಜಿಗಳು ಮನವಿ ಮಾಡಿದರು.
ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ‘ವೀರಶೈವ ಲಿಂಗಾಯತ ಸಮುದಾಯದ 250ಕ್ಕೂ ಹೆಚ್ಚು ಮಠಾಧೀಶರು ಪ್ರತಿಯೊಂದು ಒಳಪಂಗಡ ಗುರುತಿಸಬೇಕು. ಎಲ್ಲವನ್ನೂ ಒಂದೇ ಸ್ಥರದಲ್ಲಿ ತರಲು ಯತ್ನಿಸಿದಾಗ ಮಾತ್ರ ಸಮುದಾಯಗಳ ಅಭಿವೃದ್ಧಿಯ ಕನಸು ಸಾಕಾರಗೊಳ್ಳಲು ಸಾಧ್ಯ’ ಎಂದು ಹೇಳಿದರು.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಎಲ್ಲಾ ಸಮುದಾಯಗಳಲ್ಲೂ ಬಡವರು, ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅಂತಹ ಪ್ರತಿಯೊಬ್ಬರಿಗೂ ಸಂವಿಧಾನದಡಿ ಸೌಲಭ್ಯ ಸಿಗಬೇಕಿರುವುದು ನ್ಯಾಯಯುತ ಬೇಡಿಕೆಯಾಗಿದೆ’ ಎಂದು ತಿಳಿಸಿದರು.
‘ಮಠಾಧೀಶರು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಣಯ ಕೈಗೊಳ್ಳಬೇಕು. ಸಮುದಾಯಗಳ ಏಳಿಗೆಗಾಗಿ ಸ್ವಾಮೀಜಿಗಳು ಸದಾ ಒಗ್ಗಟ್ಟು ಪ್ರದರ್ಶಿಸಬೇಕು‘ ಎಂಬ ತೀರ್ಮಾನಕ್ಕೆ ಬರಲಾಯಿತು.