ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳದಲ್ಲಿ ಹದಿನಾಲ್ಕು ವರ್ಷದ ಬಳಿಕ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಮೂಲದ ಹನ್ನೆರಡು ಪೆಟ್ಟಿಗೆ ದೇವರ ಗುಗ್ಗರಿ ಹಬ್ಬ ಮಾರ್ಚ್ 2ರಿಂದ 7ರವರೆಗೆ ವಿಜೃಂಭಣೆಯಿಂದ ಜರುಗಲಿವೆ. ಅತ್ತೆ-ಸೊಸೆಯರ ಡಿಕ್ಕಿ ಈ ಹಬ್ಬದ ವಿಶೇಷ.
ಮ್ಯಾಸ ಮಂಡಲಕ್ಕೆ ಸೇರಿದ ಹನ್ನೆರಡು ಪೆಟ್ಟಿಗೆ ದೇವ ಹೆಸರಿನಲ್ಲಿ ಮಾಘ ಮಾಸದಲ್ಲಿ ಈ ಹಬ್ಬ ಆಚರಿಸುವುದು ಸಂಪ್ರದಾಯ. ನನ್ನಿವಾಳದ ಮೂಲ ಕಟ್ಟೆಮನೆ ಸೇರಿದಂತೆ 20ಕ್ಕೂ ಹೆಚ್ಚು ಹಟ್ಟಿಯ ಸಮುದಾಯದವರು ಇಲ್ಲಿ ಭಾಗವಹಿಸುತ್ತಾರೆ.
ಮಾರ್ಚ್ 2ರಂದು ಬೊಮ್ಮದೇವರಹಟ್ಟಿ ದೇವರ ದನಗಳ ಗೂಡಿಗೆ ಹೋಗಿ ವ್ರತಾಚರಣೆಯಿಂದ ಮೀಸಲು ಹಾಲು ನನ್ನಿವಾಳ ಕಟ್ಟೆಮನೆಗೆ ತರುವ ಕಾರ್ಯಕ್ರಮ ನಡೆಯಲಿದೆ. ಮಾ.4ರಂದು ಬೋಸೆದೇವರು, ಬೊಮ್ಮದೇವರು, ಗಾದ್ರಿದೇವರು ಹಾಗೂ ಬಂಗಾರದ ಪೆಟ್ಟಿಗೆ ದೇವರು ಕಟ್ಟೆಮನೆಗೆ ಬಂದು ಸೇರುತ್ತವೆ.
ಆ ದಿನ ಸಂಜೆ ಭೂಚಕ್ರ, ಗೊಡಗುಗಳು ದೇವರ ವಿಶೇಷ ಅಭರಣಗಳನ್ನು ಎತ್ತಿನ ಗೂಡಿಗೆ ತಲುಪಿಸುತ್ತಾರೆ. ದೇವರ ಗಂಗಾ ಪೂಜೆ ನಡೆಯುತ್ತದೆ.
ಬೆಳಗಿನ ಜಾವ 5ಕ್ಕೆ ಬೋಸೆದೇವರ ಪಂಜು ಹಚ್ಚುವುದು, ಮಾ.5ರಂದು ಮಧ್ಯಾಹ್ನ 2ಕ್ಕೆ ಬಿರುದಾವಳಿಗಳೊಂದಿಗೆ ದೇವರ ದನಗಳನ್ನು ಕಟ್ಟೆಮನೆಗೆ ಸೇರಿಸುವ ಕಾರ್ಯಕ್ರಮ ನಡೆಯಲಿದೆ. ಪಟ್ಟದ ದೊರೆ ಸಿಂಹಾಸನ ಮತ್ತು ಪೂಜಾರಿ, ದಾಸಯ್ಯಗಳ ಮಣೇವು ಆಚರಣೆ ನಡೆಯಲಿದೆ.
ಮಾ.5ರಂದು ಸಂಜೆ ನನ್ನಿವಾಳದ ಕಟ್ಟೆಮನೆ ಮುಂದೆ ಕಿಲಾರಿಗಳು ಉರುಮೆ ವಾದ್ಯದೊಂದಿಗೆ ದೇವರ ದನಗಳನ್ನು ಮೆರೆಸುತ್ತಾರೆ. ಮಾ.6ರಂದು ಮಧ್ಯಾಹ್ನ ವಿಶೇಷ ಮೆರವಣಿಗೆಯೊಂದಿಗೆ ದೊರೆ ಮತ್ತು ಬೇಟೆಯನ್ನು ಗ್ರಾಮಕ್ಕೆ ಕರೆತರುತ್ತಾರೆ. ಆ ದಿನ ಸಂಜೆ ಬಂಗಾರ ದೇವರ ಹತ್ತಿರ ಅತ್ತೆ-ಸೊಸೆಯರ ಡಿಕ್ಕಿ ವಿಶಿಷ್ಟ ಆಚರಣೆ ಜರುಗುತ್ತದೆ. ಮಾ.7ರಂದು ಬೆಳಿಗ್ಗೆ 5ಕ್ಕೆ ದೀಡ್ ನಮಸ್ಕಾರ, ಬೆಳಿಗ್ಗೆ 6ಕ್ಕೆ ಬಂಗಾರ ದೇವರು ನನ್ನಿವಾಳದ ಗುಡ್ಡ ಹತ್ತಿದ ನಂತರ ಎಲ್ಲಾ ಪೆಟ್ಟಿಗೆ ದೇವರ ತಮ್ಮ ಸ್ವಸ್ಥಾನಕ್ಕೆ ತೆರಳುವ ಮೂಲಕ ಹಬ್ಬ ಅಂತ್ಯಗೊಳ್ಳುತ್ತದೆ.
ಗುಗ್ಗರಿಗೆ ಬಳಸಬಹುದಾದ ದ್ವಿದಳ ಧಾನ್ಯಗಳನ್ನು ತಮ್ಮ ದೇವರಿಗೆ ಎಡೆ ಮಾಡಿ ನೈವೇದ್ಯ ಅರ್ಪಿಸಲಾಗುತ್ತದೆ. ತೊಗರಿ, ಅಲಸಂದೆ, ಹೆಸರು, ಹುರುಳಿ ಇತರೆ ಎಲ್ಲಾ ಕಾಳುಗಳನ್ನು ಒಟ್ಟಿಗೆ ಸೇರಿಸುವ ಆಚರಣೆ ಗುಗ್ಗರಿ ಹಬ್ಬ. ಗುಗ್ಗರಿಯಿಂದ ಮಾಡಿದ ನೈವೇದ್ಯವನ್ನು ಭಕ್ತರು ಪ್ರಸಾದವೆಂದು ಸ್ವೀಕರಿಸುತ್ತಾರೆ.
ದಾಸಯ್ಯಗಳು, ಕೈಗಳಲ್ಲಿ ಪಂಜುಗಳನ್ನು ಹಿಡಿದು ನರ್ತನದೊಂದಿಗೆ ಬೊಬ್ಬೆ ಹಾಕುತ್ತಾ ಪಂಜನ್ನು ಬಾಯಿಯಲ್ಲಿ ಇಟ್ಟು ಬೆಂಕಿ ನಂದಿಸುವ-ಬಾಯಿಂದ ಆ ಜ್ವಾಲೆಯನ್ನು ಉಗಿಯುವ ಪ್ರದರ್ಶನ ನೀಡುತ್ತಾರೆ. ಪೂಜಾರಿ, ದಾಸಯ್ಯರಿಂದ ಮಣೇವು ಕಾರ್ಯ ಜರುಗುತ್ತದೆ.
ಬಂಗಾರ ದೇವರ ಹತ್ತಿರ ಅತ್ತೆ-ಸೊಸೆಯರ ಡಿಕ್ಕಿ ವಿಶಿಷ್ಟ ಆಚರಣೆ ಹಬ್ಬದ ವಿಶೇಷತೆಗಳಲ್ಲೊಂದು.
‘ಹುಲಿ ಮತ್ತು ಗಾದ್ರಿ ಪಾಲನಾಯಕನ ಹೋರಾಟದ ಮೂಲಕ ಪಾರಂಪರಿಕ ವೈರಿಗಳೆಂದು ಬಿಂಬಿತವಾಗಿರುವ ಅತ್ತೆ- ಸೊಸೆಯರು ತಮ್ಮ ಆಕ್ರೋಶಗಳನ್ನು ಡಿಕ್ಕಿ ಹೊಡೆಯುವ ಮೂಲಕ ಹೊರಕ್ಕೆ ಹಾಕುತ್ತಾರೆ. ಈ ಮೂಲಕ ಒಂದು ರೀತಿಯ ಮಾನಸಿಕ ಒತ್ತಡ ಹೊರಹಾಕುವ ಪ್ರಕ್ರಿಯೆ ಇರಬಹುದು. ಮ್ಯಾಸಬೇಡ ಸಮುದಾಯ ಬೇಟೆ ಸಂಸ್ಕೃತಿ ಜತೆಗೆ ಕೃಷಿಯನ್ನು ಪ್ರಮುಖ ವೃತ್ತಿಯನ್ನಾಗಿ ಮಾಡಿಕೊಂಡ ನಂತರ ಈ ಗುಗ್ಗರಿ ಆಚರಣೆ ನಡೆಯುತ್ತಾ ಬಂದಿದೆ’ ಎನ್ನುತ್ತಾರೆ ಜಾನಪದ ವಿದ್ವಾಂಸ ಎಸ್.ಎಂ. ಮುತ್ತಯ್ಯ.
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳದಲ್ಲಿರುವ ಮ್ಯಾಸಬೇಡ ಸಮುದಾಯದ ಮೂಲ ಕಟ್ಟೆಮನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.