ಚಿಕ್ಕಜಾಜೂರು: ಭಾನುವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಕಾಲ ಹದ ಮಳೆಯಾಗಿದ್ದರಿಂದ ತಂಪಾದ ವಾತಾವರಣ ನಿರ್ಮಾಣವಾಗಿತ್ತು. ಮಳೆಯ ಆರಂಭಕ್ಕೆ ಮುನ್ನ ಬೀಸಿದ ಬಿರು ಗಾಳಿಗೆ ಹತ್ತಾರು ಮನೆಗಳ ಹೆಂಚುಗಳು ಹಾಗೂ ತಗಡಿನ ಶೀಟುಗಳು ಹಾರಿ ಹೋಗಿದ್ದು, ಸಾವಿರಾರು ಅಡಿಕೆ ಮರಗಳು ಧರೆಗುರುಳಿವೆ.
ಚಿಕ್ಕಜಾಜೂರಿನ ಮುರುಘ ರಾಜೇಂದ್ರ ವೃತ್ತದಕ್ಕೆ ಸಮೀಪದ ಹನುಮಂತಪ್ಪ ಅವರ ಮನೆಯ ಚಾವಣಿಗೆ ಹಾಕಿದ್ದ ತಗಡಿನ ಶೀಟುಗಳು ಬಿರುಗಾಳಿಗೆ ಆಂಗ್ಲರ್ ಸಹಿತ ವಿದ್ಯುತ್ ತಂತಿಗಳ ಮೇಲೆ ಹಾರಿ ಬಿದ್ದಿವೆ.
ಮುರಿದು ಬಿದ್ದ ವಿದ್ಯುತ್ ಕಂಬಗಳು, ಪರಿವರ್ತಕ: ಸಮೀಪದ ಅರಸನಘಟ್ಟ ಹಾಗೂ ಚಿಕ್ಕಂದವಾಡಿ ಗ್ರಾಮಗಳಲ್ಲಿ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಎರಡು ವಿದ್ಯುತ್ ಪರಿವರ್ತಕಗಳು ಉರುಳಿ ಬಿದ್ದಿವೆ. ಅರಸನಘಟ್ಟ ಗ್ರಾಮದ ಬಸ್ ನಿಲ್ದಾಣದ ಬಳಿ ಇದ್ದ ವಿದ್ಯುತ್ ಪರಿವರ್ತಕ ಕಂಬ ಸಹಿತ ನೆಲಕ್ಕುರುಳಿದೆ. ಚಿಕ್ಕಂದವಾಡಿಯಿಂದ ಅರಸನಘಟ್ಟ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿನ ಅಡಿಕೆ ಹಾಗೂ ಕಾಡು ಮರಗಳು, ತೆಂಗಿನ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದಿವೆ. ಸಮೀಪದ ಕೋಟೆಹಾಲ್, ಕೊಡಗವಳ್ಳಿ ಗ್ರಾಮಗಳಲ್ಲೂ ಹದ ಮಳೆಯಾಗಿದ್ದು, ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದಿದ್ದವು. ಬೆಸ್ಕಾಂ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.
ಹಾರಿ ಹೋದ ಮನೆಗಳ ಚಾವಣಿ: ಸಮೀಪದ ಚಿಕ್ಕಂದವಾಡಿ, ಅರಸನಘಟ್ಟ ಗ್ರಾಮಗಳಲ್ಲಿ ಬೀಸಿದ ಭಾರಿ ಗಾಳಿಗೆ ಮೆನೆಗಳ ಹಾಗೂ ಅಡಿಕೆ ಶೆಡ್ಗಳ ಚಾವಣಿಗೆ ಹಾಕಿದ್ದ ತಗಡಿನ ಶೀಟುಗಳು ಹಾಗೂ ಕೆಂಪು ಹೆಂಚುಗಳು ಹಾರಿ ಹೋಗಿವೆ. ಚಿಕ್ಕಂದವಾಡಿ ಗ್ರಾಮದಲ್ಲಿ ಮನೆಗಲ್ಲಿದ್ದ ದವಸ–ಧಾನ್ಯ, ಬಟ್ಟೆ, ಟಿವಿ ಮತ್ತಿತರ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ತೊಯ್ದಿವೆ. ಮನೆಗಳಲ್ಲಿ ನೀರು ನಿಂತಿದ್ದು, ಮಳೆ ನಿಂತ ನಂತರ ಮನೆಯಲ್ಲಿದ್ದ ನೀರನ್ನು ಹೊರ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು.
ನೆಲಕಚ್ಚಿದ ಅಡಿಕೆ, ತೆಂಗು: ಅರಸನಘಟ್ಟ ಗ್ರಾಮದ ವಿವಿಧ ರೈತರಿಗೆ ಸೇರಿದ 800ಕ್ಕೂ ಹೆಚ್ಚು ಅಡಿಕೆ ಮರಗಳು ಹಾಗೂ ನೂರಕ್ಕೂ ಹೆಚ್ಚು ತೆಂಗಿನ ಮರಗಳು ಉರುಳಿ ಬಿದ್ದಿವೆ.
ಹದ ಮಳೆ: ಸಮೀಪದ ಹನುನಮಕಟ್ಟೆ, ಅರಸನಘಟ್ಟ, ಚಿಕ್ಕಂದವಾಡಿ ಗ್ರಾಮದ ಮಾಕುಂಟೆ, ಅಪ್ಪರಸನಹಳ್ಳಿ, ಕೋಟೆಹಾಳ್, ಕೊಡಗವಳ್ಳಿ, ಅಪ್ಪರಸನಹಳ್ಳಿ, ಚನ್ನಪಟ್ಟಣ ಗ್ರಾಮಗಳಲ್ಲಿ 20 ನಿಮಿಷಗಳ ಕಾಲ ಬಿರುಸಿನ ಮಳೆಯಾಗಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.