ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮುದ್ದಾಪುರದಲ್ಲಿ ರಾಜ್ಯದಲ್ಲೇ ಹೆಚ್ಚು ಮಳೆ

ಹಲವು ಮನೆಗಳಿಗೆ ನುಗ್ಗಿದ ನೀರು, 184 ಹೆಕ್ಟೇರ್‌ ಬೆಳೆ ಹಾನಿ
Last Updated 7 ಅಕ್ಟೋಬರ್ 2021, 15:52 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿದಿದೆ. 24 ಗಂಟೆಯಲ್ಲಿ 24.1 ಸೆ.ಮೀ ಮಳೆಯಾಗಿದ್ದು, ಎರಡು ದಶಗಳಲ್ಲಿ ಇಷ್ಟು ಮಳೆ ಸುರಿದಿದ್ದು ಇದೇ ಮೊದಲು.

ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಹಸ್ತ ಮಳೆ ಉತ್ತಮವಾಗಿ ಸುರಿಯುತ್ತಿದೆ. ಬುಧವಾರ ಬೆಳಿಗ್ಗೆಯಿಂದ ಆರಂಭವಾದ ಮಳೆ ಮಧ್ಯಾಹ್ನದ ಬಳಿಕ ಬಿರುಸು ಪಡೆಯಿತು. ರಾತ್ರಿ ವೇಳೆಗೆ ಮಳೆಯ ಆರ್ಭಟ ಹೆಚ್ಚಾಯಿತು. ಚಿತ್ರದುರ್ಗ ತಾಲ್ಲೂಕಿನಲ್ಲಿ ಸರಾಸರಿ 12 ಸೆಂ.ಮೀ ಮಳೆಯಾಗಿದೆ. ಈ ವರ್ಷದಲ್ಲಿ ಸುರಿದ ಅಪಾರ ಪ್ರಮಾಣದ ಮಳೆ ಇದಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಳೆಯ ಆರ್ಭಟಕ್ಕೆ ಹಲವು ಮನೆಗಳಿಗೆ ನೀರು ನುಗ್ಗಿದೆ. 184 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ವಿದ್ಯುತ್ ಕಂಬ, ಮರಗಳು ನೆಲಕ್ಕುರುಳಿವೆ. ಕಟಾವು ಹಂತಕ್ಕೆ ಬಂದಿದ್ದ ಬೆಳೆ ನೀರುಪಾಲಾಗಿದ್ದು ರೈತರು ಮತ್ತೊಂದು ರೀತಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಿತ್ರುದುರ್ಗದಲ್ಲಿ ಬುಧವಾರ ರಾತ್ರಿ 8 ಗಂಟೆಯ ಬಳಿಕ ಮಳೆಯ ಆರ್ಭಟ ಹೆಚ್ಚಾಯಿತು. ಗುಡುಗು, ಬಿರುಗಾಳಿ ಸಹಿತ ಮಳೆ ವೇಗ ಪಡೆಯಿತು. ಎಡಬಿಡದೇ ಸುರಿಯುತ್ತಿದ್ದ ಮಳೆಗೆ ಹಳ್ಳ–ಕೊಳ್ಳಗಳು ತುಂಬಿ ಹರಿದವು. ನಗರ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯಿತು. ಇಡೀ ರಾತ್ರಿ ಮಳೆ ನಿರಂತರವಾಗಿ ಸುರಿದಿದ್ದರಿಂದ ನೀರಿನ ಪ್ರಮಾಣ ಹೆಚ್ಚಾಯಿತು. ಗುರುವಾರ ಕೆಲ ಹೊತ್ತು ಮಳೆ ಬಿಡುವು ನೀಡಿತು.

ಮಳೆ ಹಾಗೂ ಬಿರುಗಾಳಿಗೆ ಕೆಳಗೋಟೆಯ ಆಕಾಶವಾಣಿ ಮುಂಭಾಗದ ಬೃಹತ್‌ ಗಾತ್ರದ ಮರವೊಂದು ಧರೆಗೆ ಉರುಳಿದೆ. ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನಗರಸಭೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು. ತಾಲ್ಲೂಕಿನ ಹಲವೆಡೆ ವಿದ್ಯುತ್‌ ಕಂಬಗಳು ಬಿದ್ದಿವೆ.

ಮನೆಗೆ ನುಗ್ಗಿದ ನೀರು:ಚಿತ್ರದುರ್ಗದ ಸಾಧಿಕ್‌ ನಗರ, ಬಾಬು ಜಗಜೀವನರಾಮ್ ಬಡಾವಣೆಯ 14 ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.

ಮನೆಗೆ ನೀರು ನುಗ್ಗುತ್ತಿದ್ದಂತೆ ಎಲ್ಲರೂ ಹೊರಗೆ ಬಂದರು. ಸುರಿಯುತ್ತಿದ್ದ ಮಳೆಯಲ್ಲಿಯೇ ಜನರು ರಾತ್ರಿ ಕಳೆದಿದ್ದಾರೆ. ಗುರುವಾರ ಬೆಳಿಗ್ಗೆ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಮಳೆ ನೀರು ಹೊರಹಾಕುವ ದೃಶ್ಯ ಬಡಾವಣೆಯಲ್ಲಿ ಸಾಮಾನ್ಯವಾಗಿತ್ತು. ಬಟ್ಟೆ, ಪುಸ್ತಕ, ದಾಖಲಾತಿಗಳು, ಹಾಸಿಗೆ, ದಿನಸಿ, ಹೊದಿಕೆಗಳು ಸಂಪೂರ್ಣ ನೀರುಪಾಲಾಗಿವೆ. ಗುಮಾಸ್ತರ ಕಾಲೊನಿ, ಒಂದನೇ ವಾರ್ಡ್‌ಗಳಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

184 ಹೆಕ್ಟೇರ್‌ ಬೆಳೆ ಹಾನಿ:ಧಾರಾಕಾರವಾಗಿ ಸುರಿದ ಮಳೆಯಿಂದ ಜಿಲ್ಲೆಯ 184 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಭರಮಸಾಗರ ಹೋಬಳಿಯಲ್ಲಿ ಜಾನುವಾರುವೊಂದು ಬಲಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ಶೇಂಗಾ, ಮೆಕ್ಕೆಜೋಳ ಹಾಗೂ ಈರುಳ್ಳಿ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಭರಮಸಾಗರ, ಹಿರೇಗುಂಟನೂರು, ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ನೆಲಕ್ಕೆ ಬಿದ್ದಿದೆ. ಕಟಾವು ಹಂತಕ್ಕೆ ಬಂದಿದ್ದ ಶೇಂಗಾ ಭೂಮಿಯಲ್ಲೇ ಕೊಳೆಯುವ ಭೀತಿ ರೈತರನ್ನು ಕಾಡುತ್ತಿದೆ. ಈರುಳ್ಳಿ ಕಟಾವು ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಿತ್ರದುರ್ಗ 12 ಸೆಂ.ಮೀ ಮಳೆ

ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ. ಚಿತ್ರದುರ್ಗ ನಗರದಲ್ಲಿ 105 ಮಿ.ಮೀ ಹಾಗೂ ಗ್ರಾಮೀಣ ಪ್ರದೇಶದಲ್ಲಿ 128 ಮಿ.ಮೀ ಮಳೆ ದಾಖಲಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ 95 ಮಿ.ಮೀ, ಸಿರಿಗೆರೆ 98 ಮಿ.ಮೀ, ತುರುವನೂರಿನಲ್ಲಿ 44 ಮಿ.ಮೀ, ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ 14 ಮಿ.ಮೀ, ನಾಯಕನಹಟ್ಟಿ 44 ಮಿ.ಮೀ, ಡಿ.ಮರಿಕುಂಟೆ 50 ಮಿ.ಮೀ, ತಳಕು 54 ಮಿ.ಮೀ ಮಳೆ ಬಿದ್ದಿದೆ.

ಹಿರಿಯೂರಿನಲ್ಲಿ 60, ಬಬ್ಬೂರು 51, ಈಶ್ವರಗೆರೆ 59, ಇಕ್ಕನೂರು 35, ಸುಗೂರಿನಲ್ಲಿ 50.3 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆಯಲ್ಲಿ 31, ರಾಮಗಿರಿ 35, ಚಿಕ್ಕಜಾಜೂರು 35, ಬಿ.ದುರ್ಗ 88, ಎಚ್.ಡಿ.ಪುರ 55 ಮಿ.ಮೀ ಮಳೆಯಾಗಿದೆ. ಹೊಸದುರ್ಗದಲ್ಲಿ 19, ಶ್ರೀರಾಂಪುರ 39, ಮಾಡದಕೆರೆ 41 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮು ತಾಲ್ಲೂಕಿನ ಬಿ.ಜಿ. ಕೆರೆಯಲ್ಲಿ 20, ರಾಯಾಪುರ 15.5, ಮಿ.ಮೀ ಮಳೆಯಾಗಿದೆ.

ಇನ್ನೂ ಮೂರು ದಿನ ಮಳೆ

ಚಿತ್ರದುರ್ಗ ಜಿಲ್ಲೆಯಲ್ಲಿ ಇನ್ನೂ ಮೂರು ದಿನ ಸಾಧಾರಣ ಮಳೆ ಬೀಳುವ ಸಂಭವ ಇದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಮಳೆ ಹಾನಿ ಸಂಭವಿಸಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಸಜ್ಜಾಗಿದೆ. ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ತಹಶೀಲ್ದಾರ್ ಕಚೇರಿ ಸಂಪರ್ಕಿಸುವಂತೆ ಸೂಚನೆ ನೀಡಿದೆ.

ಚಿತ್ರದುರ್ಗ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ 08194-222416, ಚಳ್ಳಕೆರೆ 08195-250648, ಹಿರಿಯೂರು 08193-263226, 263091, ಹೊಳಲ್ಕೆರೆ 08191-275062, ಹೊಸದುರ್ಗ 08199-230224 ಹಾಗೂ ಮೊಳಕಾಲ್ಮುರು ತಾಲ್ಲೂಕು ಕಚೇರಿ ದೂ. 08198-229234 ಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT