ಚಿತ್ರದುರ್ಗ: ‘ಆಗಷ್ಟೇ ಮಗ್ಗಲು ಬದಲಿಸಿ ನಿದ್ದೆಯ ಮಂಪರಿನಲ್ಲಿದ್ದೆ. ಏಕಾಏಕಿ ಜನರ ಕಿರುಚಾಟ ಕೇಳಿತು. ಗಾಬರಿಯಲ್ಲಿ ಮೇಲೆದ್ದಾಗ ಬೆಂಕಿಯ ಕೆನ್ನಾಲಿಗೆ ಸೀಟಿನವರೆಗೂ ಚಾಚಿತ್ತು. ಕೈಯಲ್ಲಿ ಕಿಟಕಿಯನ್ನು ಬಲವಾಗಿ ಗುದ್ದಿದೆ. ಎರಡೇ ಏಟಿಗೆ ಗಾಜು ಪುಡಿಯಾಯಿತು. ಜೀವ ಬದುಕಿತು...’
ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸವರಾಜ ಕೋಡಿಹಾಳ್ ಅವರ ಮಾತಿನಲ್ಲಿ ಆತಂಕವಿತ್ತು. ದುರಂತವನ್ನು ಕಣ್ಣಾರೆ ಕಂಡಿದ್ದ ಅವರನ್ನು ಭಯ ಆವರಿಸಿತ್ತು. ನಡುಗುವ ಧ್ವನಿಯಲ್ಲೇ ಮಾತು ಆರಂಭಿಸಿದ ಅವರು, ಒಣಗುತ್ತಿದ್ದ ಬಾಯಿಗೆ ಆಗಾಗ ಬಾಟಲಿ ಇಟ್ಟು ನೀರು ಹೀರುತ್ತಿದ್ದರು.
‘ಕಿರುಚಾಟ ಕೇಳಿ ಅರೆಕ್ಷಣ ಏನೂ ತೋಚದಾಯಿತು. ಬಸ್ ಹೆದ್ದಾರಿ ಬಿಟ್ಟು ಕೆಳಗೆ ಇಳಿದು ಅಪಾಯ ಎದುರಾಗಿರಬೇಕು ಅಥವಾ ಅಪಘಾತವಾಗಿರಬೇಕು ಎಂಬ ಆಲೋಚನೆ ಬಂದಿತು. ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲವೂ ದಿಟವಾಯಿತು. ಎಂಜಿನ್ ಬಳಿಯೇ ಬೆಂಕಿ ಉರಿಯುತ್ತಿದ್ದರಿಂದ ಬಾಗಿಲ ಮೂಲಕ ಕೆಳಗೆ ಇಳಿಯುವುದು ಅಸಾಧ್ಯವೆಂಬುದು ಗೊತ್ತಾಯಿತು. ಅದಾಗಲೇ ಮೇಲೆ ಮಲಗಿದ್ದವರೊಬ್ಬರು ಕೆಳಗೆ ಜಿಗಿದಿದ್ದು ಕಣ್ಣಿಗೆ ಬಿದ್ದಿತು. ಕೈ ಕಿಟಕಿಯನ್ನು ಬಲವಾಗಿ ಗುದ್ದಿತು’ ಎನ್ನುತ್ತ ಗಾಯವಾಗಿದ್ದ ಕೈಯನ್ನು ಒಮ್ಮೆ ನೋಡಿಕೊಂಡರು.
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಬಸವರಾಜ್, ಬೆಂಗಳೂರಿನ ಬಿಎಂಟಿಸಿ ವರ್ಕ್ಶಾಪ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಘೋಷಣೆಯಾಗಿದ್ದರಿಂದ ಮೂರು ತಿಂಗಳಿಂದ ಊರಲ್ಲಿ ಉಳಿದಿದ್ದ ಅವರು ಕರ್ತವ್ಯಕ್ಕೆ ಮರಳುತ್ತಿದ್ದರು. ಕುಕ್ಕೆಶ್ರೀ ಟ್ರಾವೆಲ್ಸ್ ಸ್ಲೀಪರ್ ಕೋಚ್ ಬಸ್ನ ಕೊನೆಯ ಸೀಟಿನಲ್ಲಿ ನಿದ್ದೆಗೆ ಜಾರಿದ್ದರು. ಸ್ನೇಹಿತ ಪ್ರಶಾಂತ್ ಕೂಡ ಪಕ್ಕದ ಸೀಟಿನಲ್ಲಿದ್ದರು.
‘ಬೆಂಕಿ ಮೊದಲು ಎಂಜಿನ್ ಸಮೀಪ ಕಾಣಿಸಿಕೊಂಡಿತು. ಮಹಿಳೆಯೊಬ್ಬರಿಗೆ ಅದಾಗಲೇ ಬೆಂಕಿ ಹೊತ್ತಿಕೊಂಡಿತ್ತು. ಕಿಟಕಿ ಗಾಜಿನ ಮೂಲಕ ಮಾತ್ರ ಕೆಳಗೆ ಇಳಿಯಲು ಸಾಧ್ಯವಿತ್ತು. ಗಾಬರಿಯಲ್ಲಿ ಬಸ್ಸಿನಿಂದ ಕೆಳಗೆ ಹಾರಿದ್ದರಿಂದ ಕಾಲಿಗೆ ಏಟಾಯಿತು. ಸ್ನೇಹಿತನೊಂದಿಗೆ ಸೇರಿ ಇಬ್ಬರು ಮಕ್ಕಳನ್ನು ಹೊರಗೆ ಎಳೆದುಕೊಂಡೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಉಳಿದವರ ರಕ್ಷಣೆ ಸಾಧ್ಯವಾಗಲಿಲ್ಲ’ ಎಂದರು.
ಬದುಕಿ ಉಳಿದಿದ್ದೇ ಪವಾಡ:
ಕೋವಿಡ್–19 ಕರ್ತವ್ಯದ ಮಾಹಿತಿಗೆ ಆರೋಗ್ಯ ಇಲಾಖೆಯ ನಿರ್ದೇಶಕರ ಕಚೇರಿಗೆ ತೆರಳುತ್ತಿದ್ದ ವಿಜಯಪುರ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಪಾಂಡುರಂಗ ಚೌವಾಣ್ ಕಿಟಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅವರ ಕಾಲಿಗೆ ಶೇ 30ರಷ್ಟು ಸುಟ್ಟ ಗಾಯಗಳಾಗಿವೆ. ಆಂಬುಲೆನ್ಸ್ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ ಅವರು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.
‘ಗದ್ದಲ ಕೇಳಿ ಎಚ್ಚರವಾದಾಗ ದಟ್ಟ ಹೊಗೆ ಆವರಿಸಿಕೊಂಡು ಉಸಿರಾಟಕ್ಕೂ ತೊಂದರೆಯಾಗಿತ್ತು. ಬೆಂಕಿ ಕಾಣಿಸಿಕೊಂಡು ಬಸ್ ಹೊತ್ತಿ ಉರಿಯಲಾರಂಭಿಸಿತು. ಕೆಳಗೆ ಇಳಿದರೆ ಅಪಾಯವೆಂಬುದು ಗೊತ್ತಾಯಿತು. ತೆರೆದಿದ್ದ ಕಿಟಕಿಯಿಂದ ಹತ್ತು ಅಡಿ ಕೆಳಗೆ ನೆಗೆದೆ’ ಎಂದು ಅನುಭವ ಹಂಚಿಕೊಂಡರು.
‘ಕ್ಷಣಾರ್ಧದಲ್ಲಿ ಬಸ್ಗೆ ಬೆಂಕಿ ವ್ಯಾಪಿಸಿತು. ಬಹುತೇಕ ಎಲ್ಲರೂ ಬೆಂಕಿಯಿಂದ ಸುಟ್ಟ ಗಾಯಗಳಾಗಿವೆ. ಜೀವನದಲ್ಲಿ ಇಂತಹ ಸ್ಥಿತ ಒದಗಬಹುದು ಎಂದು ಎಣಿಸಿರಲಿಲ್ಲ. ಬದುಕಿ ಉಳಿದಿದ್ದೆ ಪವಾಡ’ ಎಂದು ಮೌನಕ್ಕೆ ಶರಣರಾದರು.
ನಸುಕಿನ 3.45ಕ್ಕೆ ಘಟನೆ
ನಿತ್ಯ ಬೆಂಗಳೂರು–ವಿಜಯಪುರಕ್ಕೆ ಸಂಚರಿಸುವ ಕುಕ್ಕೆಶ್ರೀ ಟ್ರಾವೆಲ್ಸ್ ಬಸ್ನಲ್ಲಿ 32 ಪ್ರಯಾಣಿಕರಿದ್ದರು. ರಾತ್ರಿ 9ಕ್ಕೆ ವಿಜಯಪುರದಿಂದ ಹೊರಡುವ ಬಸ್ ಬೆಳಿಗ್ಗೆ 6.30ಕ್ಕೆ ಬೆಂಗಳೂರು ತಲುಪಬೇಕಿತ್ತು. ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಸಮೀಪ ನಸುಕಿನ 3.45ಕ್ಕೆ ಬೆಂಕಿಗೆ ಆಹುತಿಯಾಯಿತು.
‘ರಾತ್ರಿ 11ಕ್ಕೆ ಐದು ನಿಮಿಷ ವಿರಾಮ ನೀಡಿದ ಚಾಲಕ ಮತ್ತೆ ಚಾಲನೆ ಏರಿದರು. ಬಸ್ ಹೊರಟ ಕೆಲವೇ ನಿಮಿಷಗಳ ಬಳಿಕ ನಿದ್ದೆಗೆ ಜಾರಿದೆ. ಮಾರ್ಗ ಮಧ್ಯ ಎಲ್ಲಿಯೂ ವಿಶ್ರಾಂತಿ ನೀಡಲಿಲ್ಲ. ಎಂಜಿನ್ನಲ್ಲಿ ಉಷ್ಣತೆ ಹೆಚ್ಚಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ’ ಎಂದು ಮತ್ತೊಬ್ಬ ಪ್ರಯಾಣಿಕರು ವಿವರಿಸಿದರು.
ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಏಕಾಏಕಿ ಬ್ರೇಕ್ ಹಾಕಿ ಬಸ್ ನಿಲುಗಡೆ ಮಾಡಿದ್ದಾರೆ. ಅಪಾಯದ ಮುನ್ಸೂಚನೆ ಅರಿತು ಕೆಳಗೆ ಇಳಿದು ಪರಾರಿಯಾಗಿದ್ದಾರೆ.
‘ನಿದ್ದೆಯಲ್ಲಿ ಇದ್ದವರು ಆಹುತಿ’
‘ಬೆಂಕಿ ಕಾಣಿಸಿಕೊಂಡ ಬಳಿಕ ಬಸ್ಸಿನಿಂದ ಕೆಳಗೆ ಇಳಿಯಲು ಕಾಲಾವಕಾಶವಿತ್ತು. ಗಾಡ ನಿದ್ದೆಯಲ್ಲಿದ್ದವರು ಎಚ್ಚರವಾಗುವುದು ತಡವಾಗಿದ್ದರಿಂದ ಆಹುತಿಯಾಗಬೇಕಾಯಿತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.
‘ಕೆಳಗೆ ಇಳಿಯಲು ಮುಂದಾದ ಪ್ರಯಾಣಿಕರು ಮಹಿಳೆ ಮತ್ತು ಮಕ್ಕಳನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ಚಾಚುತ್ತಿದ್ದರಿಂದ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೂವರು ಮಕ್ಕಳು ಸೇರಿ ಐದು ಜನರ ಮೃತದೇಹಗಳು ಬಸ್ಸಿನಲ್ಲಿ ಪತ್ತೆಯಾಗಿವೆ. ಬಸ್ ಸಂಪೂರ್ಣ ಭಸ್ಮವಾಗಿದೆ. ಚಾಲಕ ಪತ್ತೆಯಾದ ಬಳಿಕ ಮಾಹಿತಿ ಗೊತ್ತಾಗಲಿದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.