ಹೊಳಲ್ಕೆರೆ: ಪಟ್ಟಣದ ಪ್ರಸನ್ನ ಗಣಪತಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಬೇಕಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು, ಮಾರ್ಗ ಬದಲಿಸಿ, ಸಿರಿಗೆರೆಯಿಂದ ಚಿತ್ರದುರ್ಗದ ಕಡೆ ತೆರಳಿದರು.
ಗೋವಿಂದ ಕಾರಜೋಳ ಪಟ್ಟಣಕ್ಕೆ ಬರುವ ಸುದ್ದಿ ತಿಳಿದ ಬಿಜೆಪಿ ಕಾರ್ಯಕರ್ತರು, ಶಾಸಕ ಎಂ.ಚಂದ್ರಪ್ಪ ಹಾಗೂ ಎಂ.ಸಿ.ರಘುಚಂದನ್ ಅಭಿಮಾನಿಗಳು ಮುಖ್ಯವೃತ್ತದಲ್ಲಿ ಜಮಾಯಿಸಿದರು. ಇದರಿಂದ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣ ಆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಯಿತು. ಗೋವಿಂದ ಕಾರಜೋಳ ಕಾರ್ಯಕ್ರಮ ರದ್ದಾಗಿದ್ದರಿಂದ ಬಿಜೆಪಿ ಕಾರ್ಯಕರ್ತರು ಮುಖ್ಯವೃತ್ತದಲ್ಲೇ ಪ್ರತಿಭಟನೆ ನಡೆಸಿ ‘ಗೋ ಬ್ಯಾಕ್ ಕಾರಜೋಳ’ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯ ಆರ್.ಎ.ಅಶೋಕ್ ಮಾತನಾಡಿ, ‘ನಾವು ಅಪ್ಪಟ ಬಿಜೆಪಿ ಕಾರ್ಯಕರ್ತರು. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡುವುದಿಲ್ಲ. ಆದರೆ ಎಲ್ಲಿಂದಲೋ ಬಂದಿರುವ ಗೋವಿಂದ ಕಾರಜೋಳ ಅವರನ್ನು ಬೆಂಬಲಿಸಲು ನಾವು ತಯಾರಿಲ್ಲ. ಈಗಲೂ ಕಾಲ ಮಿಂಚಿಲ್ಲ. ವರಿಷ್ಠರು ಇಲ್ಲಿನ ಪರಿಸ್ಥಿತಿ ಅರಿತು ಎಂ.ಸಿ.ರಘಚಂದನ್ ಅವರಿಗೆ ಟಿಕೆಟ್ ಕೊಡಬೇಕು’ ಎಂದು ಆಗ್ರಹಿಸಿದರು.
ಪುರಸಭೆ ಸದಸ್ಯ ಆರ್.ಎ.ಅಶೋಕ್, ಬಸವರಾಜ ಯಾದವ್, ಗಿರೀಶ್, ಶಶಿಧರ್, ನಾಗರಾಜ್, ಪರಮೇಶ್ವರಪ್ಪ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.