ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣರಾಜ ಒಡೆಯರ್, ಕೆಂಪನಂಜಮ್ಮಣ್ಣಿ ಪ್ರತಿಮೆ ಅನಾವರಣ

ತಾಲ್ಲೂಕಿನ ಜನರ ಕನಸು ನನಸು: ಪೂರ್ಣಿಮಾ ಶ್ರೀನಿವಾಸ್‌
Last Updated 28 ಮಾರ್ಚ್ 2023, 6:13 IST
ಅಕ್ಷರ ಗಾತ್ರ

ಹಿರಿಯೂರು: ವಾಣಿವಿಲಾಸ ಜಲಾಶಯ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ರಾಜಮಾತೆ ಕೆಂಪನಂಜಮ್ಮಣ್ಣಿ ಅವರ ಪ್ರತಿಮೆಯನ್ನು ಸೋಮವಾರ ಅನಾವರಣ ಮಾಡಲಾಯಿತು.

ವಾಣಿವಿಲಾಸ ಅಣೆಕಟ್ಟೆಯ ರಕ್ಷಕಿ ಎಂದೇ ಖ್ಯಾತಿ ಪಡೆದಿರುವ ಕಣಿವೆ ಮಾರಮ್ಮ ದೇವಸ್ಥಾನದ ಸಮೀಪ ಪ್ರತಿಮೆ ಸ್ಥಾಪಿಸುವ ಬಗ್ಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ರಾಜ್ಯಪ್ರವರ್ಗ–1 ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಜಲಾಶಯ ಕೋಡಿ ಬಿದ್ದ ಸಂದರ್ಭದಲ್ಲಿ ಘೋಷಣೆ ಮಾಡಿದ್ದರು.

ಮೈಸೂರಿನ ಒಡೆಯರ್ ಮನೆತನದ ರಾಜಮಾತೆ ಪ್ರಮೋದಾದೇವಿ, ಯುವರಾಜ ಯದುವೀರ್ ಹಾಗೂ ಮುಖ್ಯಮಂತ್ರಿ ಅವರ ಸಮಯ ಹೊಂದಾಣಿಕೆ ಆಗದ ಕಾರಣ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಪ್ರತಿಮೆ ಅನಾವರಣ ಮಾಡಲಾಯಿತು.

ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸುಮಾರು 11 ಅಡಿ ಎತ್ತರದ ಪ್ರತಿಮೆಯನ್ನು ನೆಹರೂ ಮೈದಾನಕ್ಕೆ ತರಲಾಯಿತು. ಪ್ರತಿಮೆ ಅನಾವರಣಕ್ಕೂ ಮೊದಲು ಹಿಂದೂಪರದ ಖ್ಯಾತ ಆಗಮಿಕರಾದ ಆನಂದಶರ್ಮ ಮತ್ತು ತಂಡದವರಿಂದ ಗಣಪತಿ ಹೋಮ, ನವಗ್ರಹಹೋಮ, ಸುದರ್ಶನಹೋಮ, ಸಹಸ್ರಮೋದಕ ಹೋಮ ಹಾಗೂ ಪೂರ್ಣಾಹುತಿ ಪೂಜೆ ನಡೆಯಿತು.

ಪೂಜೆಯಲ್ಲಿ ಪೂರ್ಣಿಮಾ ಶ್ರೀನಿವಾಸ್, ಡಿ.ಟಿ. ಶ್ರೀನಿವಾಸ್‌ ಸೇರಿದಂತೆ ನೂರಾರು ದಂಪತಿ ಪಾಲ್ಗೊಂಡಿದ್ದರು.

‘ಮಾರಿಕಣಿವೆ ಪ್ರದೇಶದಲ್ಲಿ 1897ರಲ್ಲಿ ಮೈಸೂರು ಮಹರಾಜರು ಅಣೆಕಟ್ಟೆ ನಿರ್ಮಿಸದೇ ಹೋಗಿದ್ದಲ್ಲಿ ಈ ಪ್ರಾಂತ್ಯ ಬೆಂಗಾಡಾಗಿ ಉಳಿದಿರುತ್ತಿತ್ತು. ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ತಮ್ಮ ಆಭರಣಗಳನ್ನು ಮಾರಿ ಜಲಾಶಯ ನಿರ್ಮಾಣಕ್ಕೆ ಆಸರೆಯಾಗಿ ನಿಂತದ್ದು ಇತಿಹಾಸ. ನೀರಿನ ಬವಣೆಯಿಂದ ಹಿರಿಯೂರು ತಾಲ್ಲೂಕು ಒಳಗೊಂಡು ಇಡೀ ಜಿಲ್ಲೆಯನ್ನು ವಾಣಿವಿಲಾಸ ಜಲಾಶಯ ರಕ್ಷಿಸುತ್ತಿದೆ. ಅಂತಹ ಮಹನೀಯರ ಹೆಸರು ಶಾಶ್ವತವಾಗಿ ಉಳಿಯುವಂತೆ ಅವರ ಹೆಸರಿನಲ್ಲಿ ಒಂದು ವೃತ್ತವೂ ಇರಲಿಲ್ಲ. ಈಗ ತಾಲ್ಲೂಕಿನ ಜನರ ಕನಸು ನನಸಾಗಿದೆ’ ಎಂದು ಪೂರ್ಣಿಮಾ ಶ್ರೀನಿವಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT