ಚಿತ್ರದುರ್ಗ: ಪ್ರಸಕ್ತ ವರ್ಷದ ಮೊದಲ 3 ತಿಂಗಳಲ್ಲೇ ಜಿಲ್ಲೆಯಾದ್ಯಂತ 645 ಬೆಂಕಿ ಅವಘಡಗಳು ಸಂಭವಿಸಿವೆ. ಆದರೆ, ತ್ವರಿತ ಕಾರ್ಯಾಚರಣೆಗೆ ಅಗ್ನಿ ಶಾಮಕ ವಾಹನಗಳ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ.
‘15 ವರ್ಷ ಮೀರಿದ ವಾಹನ ಬಳಸುವಂತಿಲ್ಲ’ ಎಂಬ ಕೇಂದ್ರ ಸರ್ಕಾರದ ನಿಯಮದಿಂದಾಗಿ ಜಿಲ್ಲೆಯ 5 ತಾಲ್ಲೂಕು ಕೇಂದ್ರಗಳ ಅಗ್ನಿಶಾಮಕ ಠಾಣೆಯಲ್ಲಿ ತಲಾ ಒಂದೊಂದು ವಾಹನ ಕಾರ್ಯ ನಿರ್ವಹಿಸುತ್ತಿವೆ. ಉಳಿದವು ಎರಡು ತಿಂಗಳಿನಿಂದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಳಿಸಿವೆ.
ಜಿಲ್ಲಾ ಕೇಂದ್ರದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ 4,500 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ 2 ಹಾಗೂ 16,000 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ 1 ಸೇರಿದಂತೆ ಒಟ್ಟು 3 ‘ಜಲವಾಹನ’ ಕಾರ್ಯಾಚರಣೆ ನಡೆಸುತ್ತಿವೆ. ಉಳಿದ 2 ವಾಹನಗಳು ಸಂಚಾರ ಸ್ಥಗಿತಗೊಳಿಸಿವೆ. ಇದರಿಂದ ಕೆಲವು ಬೆಂಕಿ ಅವಘಡ ಪ್ರಕರಣಗಳಲ್ಲಿ ತ್ವರಿತವಾಗಿ ಕಾರ್ಯಾಚರಣೆ ನಡೆಸಲು ತೊಡಕಾಗುತ್ತಿದೆ.
‘ಐದು ವಾಹನಗಳಿದ್ದಾಗ ಎರಡ್ಮೂರು ಬೆಂಕಿ ಅವಘಡ ಸಂಭವಿಸಿದರೂ, ತ್ವರಿತವಾಗಿ ಘಟನಾ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಲು ಅನುಕೂಲವಾಗುತ್ತಿತ್ತು. 15 ವರ್ಷ ಮೀರಿದ ವಾಹನ ಬಳಸಬಾರದೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ಎರಡು ವಾಹನ ಗುಜರಿ ಸೇರುತ್ತಿದ್ದು, ಮೂರು ಜಲವಾಹನಗಳಷ್ಟೇ ಬಳಕೆಯಾಗುತ್ತಿವೆ. ಏಕಕಾಲಕ್ಕೆ ಎರಡಕ್ಕಿಂತ ಹೆಚ್ಚು ಬೆಂಕಿ ಅನಾಹುತಗಳಾದಾಗ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ’ ಎನ್ನುತ್ತಾರೆ ಅಗ್ನಿಶಾಮಕ ಠಾಣೆ ಸಿಬ್ಬಂದಿ.
ಚಿತ್ರದುರ್ಗ ಅಗ್ನಿಶಾಮಕ ಠಾಣೆ ಆವರಣದಲ್ಲಿರುವ ಒಂದು ಕೊಳವೆಬಾವಿಯಲ್ಲಿ ನೀರು ಬರುತ್ತಿದೆ. ಠಾಣೆಗೆ ವಾಹನ ಬಂದ ತಕ್ಷಣ ನೀರು ತುಂಬಿಸಲಾಗುತ್ತದೆ. ಆದರೆ, ಅವಘಡದ ಸ್ಥಳದಲ್ಲಿ ಹೆಚ್ಚು ನೀರು ಬೇಕಾದರೆ ಇಲ್ಲವೇ ಅದೇ ಮಾರ್ಗದಲ್ಲಿ ಬೇರೆ ಸ್ಥಳಕ್ಕೆ ಹೋಗಬೇಕಾದರೆ ನೀರು ಹುಡುಕಲು ಸಿಬ್ಬಂದಿ ಪರದಾಡುತ್ತಿದ್ದಾರೆ.
ಜಿಲ್ಲೆಯಾದ್ಯಂತ ಈವರೆಗೂ ಬಹುತೇಕ ಬಣವೆ, ತೋಟಗಳಲ್ಲೇ ಹೆಚ್ಚು ಅವಘಡ ಸಂಭವಿಸುತ್ತಿವೆ ಎಂಬುದು ಆತಂಕಕಾರಿ ಸಂಗತಿ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದೆ. ಬೆಳಿಗ್ಗೆ 8ರ ವೇಳೆಗೆ ಸೂರ್ಯ ಪ್ರಖರವಾಗುತ್ತಿದ್ದಾನೆ. ಜತೆಗೆ ಬಿಸಿ ಗಾಳಿಯ ವೇಗವೂ ಹೆಚ್ಚಾಗಿರುವ ಕಾರಣ ನೆಲಕ್ಕೆ ಬೀಳುವ ಒಂದು ಕಿಡಿಯಿಂದಲೂ ಅವಘಡಗಳ ಪ್ರಮಾಣವೂ ಹೆಚ್ಚಾಗುತ್ತಿದೆ.
‘ಚಿತ್ರದುರ್ಗ ತಾಲ್ಲೂಕಿನ ಗೋನೂರು, ಗುಡ್ಡದ ರಂಗವ್ವನಹಳ್ಳಿ, ಬೆಳಘಟ್ಟ, ಹಾಯ್ಕಲ್, ತಮಟಕಲ್ಲು, ಲಿಂಗದಹಳ್ಳಿ, ಐಮಂಗಲ, ಕ್ಯಾದಿಗೆರೆ, ಬುರುಜನರೊಪ್ಪ, ಮರಡಿಹಳ್ಳಿ ಭಾಗದಲ್ಲಿ ಹೆಚ್ಚು ಅವಘಡಗಳು ಸಂಭವಿಸಿವೆ. ಉಳಿದಂತೆ ತೋಟಗಳು ಹೆಚ್ಚಿರುವ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಭಾಗದಲ್ಲಿ ನಿತ್ಯವೂ ಅಗ್ನಿ ಅವಘಡದಂತಹ ಪ್ರಕರಣ ದಾಖಲಾಗುತ್ತಿವೆ’ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ಅಗಡಿ.
ಜಿಲ್ಲೆಯಲ್ಲಿ ಜಲವಾಹನಗಳ ಕೊರತೆ ಇದೆ. ಅನಿವಾರ್ಯ ಸಮಯದಲ್ಲಿ ದಾವಣಗೆರೆಯಿಂದ ವಾಹನ ಕರೆಯಿಸಿಕೊಳ್ಳುತ್ತೇವೆ. ಬರದ ಕಾರಣಕ್ಕೆ ನೀರಿನ ಸಮಸ್ಯೆಯೂ ಎದುರಾಗಿದೆ. ಹೆಚ್ಚುವರಿ ವಾಹನಗಳನ್ನು ನೀಡಿದರೆ ಕಾರ್ಯಾಚರಣೆಗೆ ಅನುಕೂಲವಾಗಲಿದೆ.ಸೋಮಶೇಖರ್ ವಿ.ಅಗಡಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಿಸಬೇಕು ಎಂದು ಸ್ಥಳ ಪರಿಶೀಲನೆ ನಡೆಸಿ ಒಂದು ಹಂತದ ಸಿದ್ಧತೆ ಪೂರ್ಣಗೊಳಿಸಲಾಗಿತ್ತು. ಸಚಿವ ಸಂಪುಟದ ಒಪ್ಪಿಗೆ ಮತ್ತು ಅನುದಾನ ಮಂಜೂರಾದ ಕೂಡಲೇ ಹಸಿರು ನಿಶಾನೆ ದೊರೆಯಲಿದೆ.ಪಿ.ಎಸ್.ಜಯರಾಮಯ್ಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಮೈಸೂರು ವಿಭಾಗ
ನಾಯಕನಹಟ್ಟಿ ತಳಕು ಹೋಬಳಿಯ ಗಡಿಗ್ರಾಮಗಳಲ್ಲಿ ಅಗ್ನಿಅವಘಡ ಸಂಭವಿಸಿದರೆ ಚಳ್ಳಕೆರೆಯಿಂದ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಬಣವೆಗಳು ಸುಟ್ಟಿರುತ್ತವೆ. ಇದರಿಂದ ರೈತರಿಗೆ ನಷ್ಟ ಹೆಚ್ಚು. ಎರಡು ಹೋಬಳಿಗೆ ಒಂದರಂತೆ ಠಾಣೆ ನಿರ್ಮಿಸಿದರೆ ಅನುಕೂಲ.ಟಿ.ಕೃಷ್ಣಮೂರ್ತಿ ಗ್ರಾಮಸ್ಥ ತಳಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.