ಚಿತ್ರದುರ್ಗ: ‘ಡಿಜಿಟಲ್ ಗ್ರಂಥಾಲಯಕ್ಕೆ ಒತ್ತು ನೀಡಲಾಗಿದ್ದು, ಜಿಲ್ಲೆಯಲ್ಲಿ ಒಂದು ಲಕ್ಷ ಸದಸ್ಯತ್ವ ನೋಂದಣಿ ಮಾಡಿಸಬೇಕು’ ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಎಸ್. ಸತೀಶ್ಕುಮಾರ್ ಹೊಸಮನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ, ಹೊಳಲ್ಕೆರೆಯ ಶಾಖಾ ಗ್ರಂಥಾಲಯ ಹಾಗೂ ಹೊಸದುರ್ಗ ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
‘ರಾಜ್ಯದಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ 20 ಲಕ್ಷ ಸದಸ್ಯತ್ವ ನೋಂದಣಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3.45 ಲಕ್ಷ ಹಾಗೂ ಕಲಬುರಗಿಯಲ್ಲಿ 3.35 ಲಕ್ಷ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಮುಗಿದಿದೆ. ಒಟ್ಟು 4 ಲಕ್ಷ ಪುಸ್ತಕಗಳು ಡಿಜಿಟಲ್ ಗ್ರಂಥಾಲಯದಲ್ಲಿ ಲಭ್ಯವಿದ್ದು, 10 ಲಕ್ಷ ಪುಸ್ತಕ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಓದುಗರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಇಲ್ಲಿನ ಧವಳಗಿರಿ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಕಟ್ಟಡವೂ ಶೀಘ್ರ ಲೋಕಾರ್ಪಣೆಯಾಗಬೇಕು. ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ, ತ್ವರಿತವಾಗಿ ಆರಂಭಿಸಿ’ ಎಂದು ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಅವರಿಗೆ ಸೂಚನೆ ನೀಡಿದರು.
ಗ್ರಂಥಾಲಯ ಸಂಘದ ನಿರ್ದೇಶಕರಾದ ಮೋಹನ್ ದಾಸ್, ಎಂ.ಎಂ. ಬಾರಕೇರ್, ಎಫ್.ಆರ್. ಹೆಬ್ಬಳ್ಳಿ, ಕೆ. ಗೋಪಾಲ್, ಡಿ. ತಿಮ್ಮರಾಯ್, ಮಕ್ಸೂದ್ ಅಲಿ, ಎಂ.ಬಿ. ತಿಪ್ಪಮ್ಮ, ಎಂ.ಎನ್. ಸವಿತಾ, ಎಸ್.ಬಿ. ಪಾಟೀಲ್, ಟಿ. ರಾಘವೇಂದ್ರಸ್ವಾಮಿ, ಎನ್. ಸುನಿಲ್ಕುಮಾರ್ ಇದ್ದರು.