ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಸಚಿವರ ವಾಸ್ತವ್ಯ, ಗಿರಿಧಾಮಕ್ಕೆ ನಿರ್ಬಂಧ: ಬೀಗ ಮುರಿದು ಒಳಹೋದ ಪ್ರವಾಸಿಗರು

ಜೋಗಿಮಟ್ಟಿ ಗಿರಿಧಾಮ
Last Updated 29 ಜುಲೈ 2018, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಅರಣ್ಯ ಸಚಿವ ಆರ್‌. ಶಂಕರ್‌ ವಾಸ್ತವ್ಯ ಹೂಡಿದ್ದರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಪ್ರವಾಸಿಗರು ಭಾನುವಾರ ಜೋಗಿಮಟ್ಟಿ ಗಿರಿಧಾಮದ ಪ್ರವೇಶ ದ್ವಾರದ ಬೀಗ ಮುರಿದು ಒಳ ನುಗ್ಗಿದರು.

ಪ್ರವಾಸಿಗರ ಆಕ್ರೋಶ ಕಟ್ಟೆಯೊಡೆದ ಪರಿಣಾಮ ಅರಣ್ಯ ಇಲಾಖೆ ಸಿಬ್ಬಂದಿ ಮೂಕಪ್ರೇಕ್ಷರಾಗಿದ್ದರು. ಸಚಿವರು ತಂಗಿದ್ದ ಪ್ರವಾಸಿ ಮಂದಿರ ಹೊರತುಪಡಿಸಿ ಉಳಿದೆಡೆ ಸಂಚರಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಯಿತು.

ಶನಿವಾರ ರಾತ್ರಿ ಚಿತ್ರದುರ್ಗಕ್ಕೆ ಬಂದಿದ್ದ ಶಂಕರ್‌, ಜೋಗಿಮಟ್ಟಿ ಗಿರಿಧಾಮದ ಬಂಗಲೆಯಲ್ಲಿ ತಂಗಿದ್ದರು. ಹೀಗಾಗಿ, ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದ್ದರು. ಪ್ರಕೃತಿ ಸೌಂದರ್ಯ ಆಸ್ವಾದಿ ಸಲು ವಾರಾಂತ್ಯದಲ್ಲಿ ಬಂದಿದ್ದ ಪ್ರವಾಸಿಗರಿಗೆ ಇದರಿಂದ ನಿರಾಸೆ ಉಂಟಾಯಿತು.

ಗಿರಿಧಾಮದ ಪ್ರವೇಶ ದ್ವಾರದ ಬಳಿ 50ಕ್ಕೂ ಹೆಚ್ಚು ದ್ವಿಚಕ್ರ ವಾಹನ ಹಾಗೂ 25ಕ್ಕೂ ಅಧಿಕ ಕಾರುಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಈ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಚಿವರು ಮರಳಿದ ಬಳಿಕ ಪ್ರವೇಶ ಕಲ್ಪಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆ ಬಹುತೇಕರನ್ನು ಕೆರಳಿಸಿತು. ಕುಪಿತಗೊಂಡ ಪ್ರವಾಸಿಗರು ಗೇಟಿನ ಬೀಗವನ್ನು ಕಲ್ಲಿನಿಂದ ಜಜ್ಜಿದರು.

ಅರಣ್ಯ ಸಚಿವರು ಮರಳುವ ವೇಳೆಯಲ್ಲಿಯೂ ಪ್ರವಾಸಿಗರು ಕಿರಿಕಿರಿ ಅನುಭವಿಸಿದರು. ಗಿರಿಧಾಮದ ರಸ್ತೆಯಲ್ಲಿ ಪ್ರವಾಸಿಗರ ಸಂಚಾರಕ್ಕೆ ನಿರ್ಬಂಧ ಹೇರಿದರು. ಇದರಿಂದ ಕಿರಿದಾದ ರಸ್ತೆಯಲ್ಲಿ ಸಂಚಾರ ಸಮಸ್ಯೆ ತಲೆದೋರಿತು. ಕೆಲ ಪ್ರವಾಸಿಗರ ವಾಹನಗಳನ್ನು ಬೆಟ್ಟದ ಬದಿಗೆ ತಳ್ಳಿ ಸಚಿವರ ಕಾರು ತೆರಳಲು ಸಿಬ್ಬಂದಿ ಅನುವು ಮಾಡಿಕೊಟ್ಟರು.

* ನಾನು ವಾಸ್ತವ್ಯ ಹೂಡಿದ್ದಾಗ ಪ್ರವಾಸಿಗರಿಗೆ ನಿರ್ಬಂಧ ಹೇರಿರುವುದು ಗೊತ್ತಿಲ್ಲ. ಗಣ್ಯರು ತಂಗಿದ್ದಾಗಲೂ ಪ್ರವಾಸಿಗರಿಗೆ ತೊಂದರೆ ನೀಡದಂತೆ ಸೂಚಿಸುತ್ತೇನೆ
-ಆರ್‌.ಶಂಕರ್‌, ಅರಣ್ಯ ಸಚಿವ

* ಗಿರಿಧಾಮ ನೋಡಲು ನಸುಕಿನ 5.30ಕ್ಕೆ ಕುಟುಂಬ ಸಮೇತ ಬಂದಿದ್ದೆವು. ಸಚಿವರು ತಂಗಿದ್ದರಿಂದ ಒಳಗೆ ಬಿಡಲಿಲ್ಲ. ಅಧಿಕಾರಿಗಳ ವರ್ತನೆಯಿಂದ ಬೇಸರವಾಗಿದೆ
-ಪ್ರಜ್ವಲ್‌, ಪ್ರವಾಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT