ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಕೇಂದ್ರ ಬಜೆಟ್‌ | ನಿರೀಕ್ಷೆ ಹುಸಿ: ಭದ್ರಾ ಅನುದಾನದ ನಿರೀಕ್ಷೆಗೆ ತಣ್ಣೀರು

Published : 2 ಫೆಬ್ರುವರಿ 2026, 7:04 IST
Last Updated : 2 ಫೆಬ್ರುವರಿ 2026, 7:04 IST
ಫಾಲೋ ಮಾಡಿ
Comments
ಜನಾಭಿಪ್ರಾಯ
2023ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ತಾವೇ ಘೋಷಿಸಿದ ₹ 5,300 ಕೋಟಿ ಅನುದಾನ ಬಿಡುಗಡೆ ಸಂಬಂಧ ಯಾವುದೇ ಪ್ರಸ್ತಾಪ ಇಲ್ಲದಿರುವುದು ಬೇಸರದ ಸಂಗತಿ. ಕೊಟ್ಟ ಮಾತು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ರಾಜ್ಯದ ಜನರ ಹಿತ ನಿರ್ಲಕ್ಷ್ಯಿಸಿರುವುದು ಸರಿಯಲ್ಲ.
ಪಿ.ಕೋದಂಡರಾಮಯ್ಯ, ಅಧ್ಯಕ್ಷ, ಜಿಲ್ಲಾ ನೀರಾವರಿ ಹೋರಾಟ ಸಮಿತಿ
ಕೇಂದ್ರ ಬಜೆಟ್‌ನಲ್ಲಿ ರೈತರ ಆದಾಯ ಹೆಚ್ಚಿಸಲು ಒತ್ತು ನೀಡಲಾಗಿದೆ. ತೆಂಗು ಪ್ರೋತ್ಸಾಹ ಯೋಜನೆಯಡಿ ತೆಂಗಿನ ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ ಕೊಡಲಾಗಿದೆ. ಕ್ಯಾನ್ಸರ್‌ಗೆ ಸಂಬಂಧಿಸಿದ 17 ಔಷಧಿ ಮತ್ತು ಏಳು ಅಪರೂಪದ ಕಾಯಿಲೆಗಳ ಔಷಧಿಗಳ ಮೇಲಿನ ಸುಂಕ ವಿನಾಯಿತಿ ನೀಡುವ ಜತೆಗೆ ಬಂಡವಾಳ ವೆಚ್ಚವನ್ನು ಬಜೆಟ್‌ನಲ್ಲಿ ಹೆಚ್ಚಿಸಲಾಗಿದೆ.
ಗೋವಿಂದ ಕಾರಜೋಳ, ಸಂಸದ
ವಿಕಸಿತ ಭಾರತಕ್ಕೆ ಬುನಾದಿ ಹಾಕಲಾಗಿದೆ. ಬರುವ ದಶಕಗಳಲ್ಲಿ ಎಐ ಸೇರಿದಂತೆ ನೂತನ ತಾಂತ್ರಿಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ತೆಂಗು, ಗೋಡಂಬಿ ಬೆಳಗಾರರಿಗೆ ಅನುಕೂಲವಾಗಿದೆ. ಜವಳಿ ವಲಯಕ್ಕೆ ಹೆಚ್ಚು ಆದ್ಯತೆ ನೀಡಿದ್ದು, ಇದರಿಂದ ರಾಜ್ಯಕ್ಕೆ ಹೆಚ್ಚು ಸಹಾಯವಾಗಲಿದೆ.
ಎಂ.ಆದರ್ಶ, ಯುವ ಚಿಂತಕ
ಬಜೆಟ್‌ನಲ್ಲಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್‌ ಕಾರಿಡಾರ್‌ಗಳ ಸುತ್ತಮುತ್ತ 5 ವಿಶ್ವವಿದ್ಯಾಲಯ ಪಟ್ಟಣ ನಿರ್ಮಾಣದ ಪ್ರಸ್ತಾವನೆ ಸ್ವಾಗತಾರ್ಹ. ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪನೆ ಮಹಿಳಾ ಸಬಲೀಕರಣಕ್ಕೆ ಬಲ ನೀಡಿದೆ.
ಎ.ಆಶಾ, ಅರ್ಥಶಾಸ್ತ್ರ ಸಂಶೋಧನಾ ವಿದ್ಯಾರ್ಥಿನಿ
ಕೇಂದ್ರದ ಬಜೆಟ್‌ನಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಹಾಗೂ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರವಾಸೋದ್ಯಮ ಯೋಜನೆಗಳನ್ನು ಘೋಷಿಸಿರುವುದು ಭವಿಷ್ಯದ ಭಾರತಕ್ಕೆ ನೆರವಾಗಲಿದೆ. ಪಶ್ಚಿಮ ಘಟ್ಟದ ಉಳಿವಿನ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಕರಾವಳಿ ಚಾರಣದ ಯೋಜನೆ ರೂಪಿಸಿರುವುದು ಸ್ವಾಗತಾರ್ಹ.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ
ಈ ಬಾರಿಯ ಕೇಂದ್ರದ ಬಜೆಟ್ ರಾಜ್ಯದ ಪಾಲಿಗೆ ನಿರಾಶಾದಾಯಕವಾಗಿದ್ದು, ಚುನಾವಣೆ ಹತ್ತಿರವಿರುವ ರಾಜ್ಯಗಳಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡದೆ ರೈತರನ್ನು ವಂಚಿಸಲಾಗಿದೆ.
ಎಸ್.ಆರ್. ರಘುವೀರ್, ಯುವ ಕೃಷಿಕ, ವಾಣಿವಿಲಾಸಪುರ, ಹಿರಿಯೂರು
ಈ ಬಾರಿ ವಿಕಸಿತ ಭಾರತದ ಹೆಸರಲ್ಲಿ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ವಿಶೇಷವಾಗಿ ಉದ್ಯೋಗ ಸೃಷ್ಟಿ ಮತ್ತು ಯುವಜನಾಂಗದ ಸಬಲೀಕರಣಕ್ಕೆ ಒತ್ತುಕೊಡಲು ಕೊನೆಗೂ ಪ್ರಯತ್ನಿಸಿದಂತಿದೆ. ಭದ್ರಾ ಮೇಲ್ದಂಡೆ ಯೋಜನೆ ಮುಗಿಸಲು ವಿಶೇಷ ಪ್ಯಾಕೇಜ್ ಕೊಡದಿರುವುದಕ್ಕೆ ಬೇಸರವಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದಿಕ್ಕೆಟ್ಟಿರುವ ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿ ಸುಧಾರಿಸಲು ಇನ್ನೂ ಉತ್ತಮವಾದ ಕೊಡುಗೆಗಳನ್ನು ನೀಡಬಹುದಿತ್ತು
ಮಧುಕುಮಾರ, ಉಪನ್ಯಾಸಕರು, ಬಳ್ಳೆಕೆರೆ
ದೇಶದ ಹಳ್ಳಿಗಳಲ್ಲಿ ಬದುಕುತ್ತಿರುವ ಕೋಟ್ಯಂತರ ಜನರ ಬದುಕಿಗೆ ಹಣಕಾಸು ಸಚಿವೆ ಮಂಡಿಸಿದ ಬಜೆಟ್‌ ನೆರವಾಗಿಲ್ಲ. ಹಳ್ಳಿಗರ ಬದುಕಿಗೆ ಶಕ್ತಿ ತುಂಬುವ ಯೋಜನೆಗಳು ಇದರಲ್ಲಿ ಕಾಣಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಲವು ವರ್ಷಗಳ ಹಿಂದೆ ಘೋಷಣೆ ಮಾಡಿದ್ದ ಜಲಜೀವನ್‌ ಮಿಷನ್‌ ಯೋಜನೆಯ ಗುಂಡಿಗಳನ್ನೂ ಮುಚ್ಚಲಾಗಿಲ್ಲ. ಅವುಗಳಲ್ಲಿ ನೀರು ಬರುವುದು ಇನ್ನೂ ಕನಸಿನ ಮಾತೇ ಸರಿ. ಬಹು ನಿರೀಕ್ಷೆಯ ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ಸರ್ಕಾರ ನೆರವು ನೀಡುವ ಮಾತೇ ಆಡದಿರುವುದು ವಿಷಾದನೀಯ.
ನಾಗರಾಜ ಬೆಲ್ಲದ,ಗ್ರಾಮ ಪಂಚಾಯಿತಿ ಸದಸ್ಯ, ಸಿರಿಗೆರೆ
ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಹಣಕಾಸು‌ ಸಚಿವೆ ನಿರ್ಮಲ ಸೀತಾರಾಮನ್ ₹ 1,09,029 ಕೋಟಿ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ. ಈ ಅನುದಾನವನ್ನು ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಬಳಸಿಕೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕೌಶಲಯುಕ್ತ ಶಿಕ್ಷಣ ನೀಡುವ ನೀತಿಗಳನ್ನು ಅಳವಡಿಸಿಕೊಂಡರೆ ಉತ್ತಮ. 
ಟಿ.ರೂಪ, ಮುಖ್ಯಶಿಕ್ಷಕಿ,ನಾಯಕನಹಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT