ಚಳ್ಳಕೆರೆ: ಬೆಳೆ ಹಾನಿ, ಬೆಳೆನಷ್ಟ ಮುಂತಾದ ಯಾವುದೇ ಸಮಸ್ಯೆ ಎದುರಾದರೂ ಧೃತಿಗೆಡಬಾರದು ಎಂದು ಶಾಸಕ ಟಿ. ರಘುಮೂರ್ತಿ ರೈತರಿಗೆ ಸಲಹೆ ನೀಡಿದರು.
ತಾಲ್ಲೂಕು ರೈತ ಸಂಘ, ಕೃಷಿ, ಅರಣ್ಯ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ಕಾಲುವೆಹಳ್ಳಿ ರೈತ ಮುಖಂಡ ಕೆ.ಪಿ.ಭೂತಯ್ಯ ಅವರ ತೋಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಮತ್ತು ರೈತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬರಗಾಲಕ್ಕೆ ತುತ್ತಾದ ಬಯಲುಸೀಮೆಯ ರೈತರು, ಆಧುನಿಕ ತಂತ್ರಜ್ಞಾನದ ಬಳಕೆ, ಸರ್ಕಾರದ ಕೃಷಿ ಪೂಕರ ಯೋಜನೆಗಳ ಸೌಲಭ್ಯ ಪಡೆದುಕೊಂಡು ಕೃಷಿ ವಿಜ್ಞಾನಿಗಳ ಸಲಹೆಯಿಂದ ಕೃಷಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕಿನಲ್ಲಿನ ಬೆಳೆನಷ್ಟ ಪರಿಹಾರದ ಅವ್ಯವಹಾರ ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮಿಶ್ರಬೆಳೆ ವಿಧಾನದ ಬಳಕೆಯಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಸಾವಯವ ವಿಧಾನದ ಮೂಲಕ ಹೂವು, ಹಣ್ಣು ಹಾಗೂ ತೋಟಗಾರಿಕಾ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಕೃಷಿ ಜಂಟಿ ನಿರ್ದೇಶಕ ಪಿ.ರಮೇಶ್ಕುಮಾರ್ ಕಿವಿಮಾತು ಹೇಳಿದರು.
ಆಧುನಿಕ ಕೃಷಿ ಬೇಸಾಯ ಕ್ರಮವನ್ನು ತಪ್ಪದೆ ಅನುಸರಿಸಬೇಕು. ಮತ್ತು ಮಳೆಯಾಶ್ರಿತ ಒಣಭೂಮಿ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು ಎಂದು ಕೃಷಿ ವಿಜ್ಞಾನಿ ಡಾ.ಓಂಕಾರಪ್ಪ ಸಲಹೆ ನೀಡಿದರು.
ಕೃಷಿ ವಿಜ್ಞಾನಿ ಡಾ.ಶಂಕರಪ್ಪ, ಹಂಪಣ್ಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಅರಣ್ಯಾಧಿಕಾರಿ ರಾಜಣ್ಣ, ಜಿಲ್ಲಾ ಕೃಷಿ ಅಧಿಕಾರಿ ಡಾ.ಸುಜಾತ, ಕೆ.ಪಿ. ಭೂತಯ್ಯ ಮಾತನಾಡಿದರು.
ತಹಶೀಲ್ದಾರ್ ರೇಹಾನ್ ಪಾಷಾ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೇವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೊಮ್ಮಜ್ಜ, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಭಾಗ್ಯ, ಕೃಷಿ ಸಹಾಯಕ ನಿರ್ದೇಶಕ ಡಾ.ಅಶೋಕ್, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಡಾ.ಆರ್. ವಿರೂಪಾಕ್ಷಪ್ಪ, ತಾಲ್ಲೂಕು ವಲಯ ಅರಣ್ಯಾಧಿಕಾರಿ ಬಹುಗುಣ, ರೈತ ಮುಖಂಡ ತಿಪ್ಪೇಸ್ವಾಮಿ, ಶಿವಣ್ಣ, ಹೊರಕೇರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.