ಚಿತ್ರದುರ್ಗ: ಬಹಿರಂಗದ ಶತ್ರುಗಳೊಂದಿಗೆ ಹೋರಾಡಿ ಗೆಲುವು ಸಾಧಿಸಬಹುದು. ಆದರೆ, ಅಂತರಂಗದ ಬಹುದೊಡ್ಡ ವೈರಿ ಅಹಂಕಾರ ಮತ್ತು ಅಜ್ಞಾನದೊಂದಿಗೆ ಹೋರಾಟ ಮಾಡುವುದು ಸುಲಭವಲ್ಲ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಮರುಘಾ ಮಠದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ 20ನೇ ದಿನದ ನೇರಪ್ರಸಾರ ಉಪನ್ಯಾಸದಲ್ಲಿ ಅವರು ಮಾತನಾಡಿದರು.
‘ಮಾನವನನ್ನು ಒಮ್ಮೊಮ್ಮೆ ಅಹಂಕಾರ ಆವರಿಸಿಕೊಳ್ಳುತ್ತದೆ. ಇದೊಂದು ರೀತಿಯ ವಿಷಸರ್ಪವಿದ್ದ ಹಾಗೆ. ಅಷ್ಟು ಸುಲಭವಾಗಿ ಇದನ್ನು ಬಿಡಿಸಲು ಸಾಧ್ಯವಿಲ್ಲ. ಅಜ್ಞಾನ ಆವರಿಸಿಕೊಂಡು ದುಷ್ಟತನಕ್ಕೆ ಪ್ರೇರಣೆ ನೀಡುತ್ತದೆ. ಇದು ಜೀವನದ ಸ್ವಾರಸ್ಯವನ್ನು ಹಾಳು ಮಾಡುತ್ತದೆ’ ಎಂದು ವಿವರಿಸಿದರು.
‘ಅಹಂಕಾರದಿಂದ ಅಂತಸತ್ವ ಬೂದಿಯಾಗುತ್ತದೆ. ವ್ಯಕ್ತಿತ್ವವನ್ನು ನಾಶಪಡಿಸುತ್ತದೆ. ಬದುಕು ಬಂಧನಕ್ಕೆ ಒಳಗಾಗುತ್ತದೆ. ಧನ ಸಂಚಾರ ಹೆಚ್ಚಾದಾಗ ಅಹಂಕಾರ ಬೆಳೆಯುವ ಸಾಧ್ಯತೆ ಇದೆ. ಅಧ್ಯಯನ, ಪರಮಾರ್ಥಯಾನ ಹಾಗೂ ಸತ್ಸಂಗದಿಂದ ಅಹಂಕಾರವನ್ನು ದೂರ ಮಾಡಬಹುದು’ ಎಂದು ಸಲಹೆ ನೀಡಿದರು.