ಮೊಳಕಾಲ್ಮುರು: ತಾಲ್ಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ನಾಗಸಮುದ್ರ ಕೆರೆ ತುಂಬಿ ಕೋಡಿ ಹರಿಯುತ್ತಿದೆ.
ದೇವಸಮದ್ರ ಹೋಬಳಿಯಲ್ಲಿ ಪ್ರಮುಖವಾಗಿರುವ ಈ ಕೆರೆಗೆ ಶಿಡ್ಲಹಳ್ಳ ನೀರು ಹರಿದಿರುವ ಪರಿಣಾಮ ತುಂಬಿದೆ. 2010ರಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಷ್ಟ್ರಮಟ್ಟದ ಕಾಂಗ್ರೆಸ್ ಬರ ಅಧ್ಯಯನ ಸಮಯದಲ್ಲಿ ಈ ಕೆರೆಯನ್ನು ರಾಜ್ಯದ ವೀಕ್ಷಣೆಗಾಗಿ ಪರಿಗಣಿಸಿ ಭೇಟಿ ನೀಡಿ ಪರಿಶೀಲಿಸಿದ್ದರು.
12 ವರ್ಷಗಳ ನಂತರ ಕೆರೆ ತುಂಬಿದೆ. ಕೋಡಿ ನೀರು ವಿಠಲಾಪುರ, ವೆಂಕಟಾಪುರ ಗ್ರಾಮಗಳ ಮಾರ್ಗವಾಗಿ ಜಿನಗಿಹಳ್ಳ ಮೂಲಕ ಆಂಧ್ರಪ್ರದೇಶಕ್ಕೆ ಹರಿಯುತ್ತದೆ. 500 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಬೆಳೆ ಬೆಳೆಯುವ ಜತೆಗೆ ಅಂತರ್ಜಲ ಅಭಿವೃದ್ಧಿಗೆ ಅನುಕೂಲವಾಗಿದೆ.
‘ಕೆರೆ ತೂಬಿನ ಹತ್ತಿರ ನೀರು ಸೋರಿಕೆಯಾಗುತ್ತಿದೆ. ಏರಿ ಬಳಿ ಮಣ್ಣು ಕುಸಿತವಾಗಿದ್ದು ದುರಸ್ತಿ ಮಾಡಬೇಕಿದೆ. ಇಲ್ಲವಾದಲ್ಲಿ ಬಿರುಕು ಬಿಟ್ಟು ನೀರು ಹೊರ ಹರಿಯುವ ಆತಂಕ ಎದುರಾಗಿದೆ’ ಎಂದು ಗ್ರಾಮಸ್ಥ ಗೋವಿಂದಪ್ಪ ಮಾಹಿತಿ ನೀಡಿದರು.