ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಶೇಂಗಾದ ಕಟಾವು ಕಾರ್ಯ ಆರಂಭವಾಗಿದೆ.ಇಳುವರಿ ಕುಸಿತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಈ ಭಾಗದ ಮುಖ್ಯ ವಾಣಿಜ್ಯ ಬೆಳೆ ಎಂದು ಶೇಂಗಾ ಹಲವು ವರ್ಷಗಳಿಂದ ಗುರುತಿಸಿಕೊಂಡಿದೆ. ಈ ವರ್ಷ ತಾಲ್ಲೂಕಿನಲ್ಲಿ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಉತ್ತಮವಾಗಿ ಬೆಳೆದಿದ್ದ ಶೇಂಗಾ ಅಕ್ಟೋಬರ್ ತಿಂಗಳಿನಲ್ಲಿಕೈಕೊಟ್ಟ ಮಳೆಯಿಂದಾಗಿ ಪೂರ್ಣ ಕೈತಪ್ಪಿತು. ಹೂ ಹಾಗೂ ಕಾಯಿ ಕಟ್ಟುವ ಸಮಯದಲ್ಲಿನ ಮಳೆ ಅಭಾವವು ಸಂಕಷ್ಟಕ್ಕೀಡು ಮಾಡಿದೆ.
ಸಾಮಾನ್ಯವಾಗಿ ನವೆಂಬರ್ ಅಂತ್ಯಕ್ಕೆ ಶೇಂಗಾ ಕಟಾವು ಮಾಡಲಾಗುತ್ತಿತ್ತು. ಆದರೆ, ಈ ವರ್ಷ ತುಸು ಮುಂಚೆಬಿತ್ತನೆ ಮಾಡಲಾಗಿದೆ. ಅಲ್ಲದೇಕೊಳೆರೋಗ ಕಾಣಿಸಿಕೊಂಡು ಬುಡ ಕೊಳೆಯಲು ಆರಂಭವಾಗಿರುವುದರಿಂದ ಕಟಾವಿಗೆ ರೈತರು ಮುಂದಾಗಿದ್ದಾರೆ. ಹಸಿ ಇಲ್ಲದ ಕಾರಣ ಮಡಿಕೆ ಒಡೆದುಕಟಾವು ಮಾಡಲಾಗುತ್ತಿದೆ. ಇದರಿಂದ ಹೆಚ್ಚು ಖರ್ಚಾಗುತ್ತಿದೆ ಎಂದು ರೈತರಾದ ನಾಗೇಂದ್ರಪ್ಪ, ನಾಗಣ್ಣ ಅಳಲು ತೋಡಿಕೊಂಡರು.
‘4 ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, 24 ಚೀಲ ಇಳುವರಿ ಬಂದಿದೆ. ಕಾಯಿ ಜಟ್ಟಿದ್ದು ತೂಕವಿಲ್ಲ.ಸ್ಥಳೀಯವಾಗಿ ಮಾರಾಟವಾಗದ ಕಾರಣ ಚಳ್ಳಕೆರೆಯಲ್ಲಿ ಮಾರಾಟ ಮಾಡಿದ್ದೇನೆ. ಹಾಕಿದ ಬಂಡವಾಳದ ಕಾಲು ಭಾಗ ವಾಪಸ್ಸಾಗಿದೆ. ಪ್ರತಿವರ್ಷ ಇದೇರೀತಿ ನಷ್ಟವಾಗುತ್ತಿದ್ದು, ಪರಿಹಾರ ಮಂಜೂರುಮಾಡುತ್ತಿಲ್ಲ’ ಎಂದು ರಾಯಾಪುರದ ಗುರುಮೂರ್ತಿ ದೂರಿದರು.
‘ಕಟಾವು ಮಾಡಿ ಕಣದಲ್ಲಿ ಬಣವೆ ಹಾಕಿದ್ದೇನೆ. ಈಗತುಂತುರು ಮಳೆ ಆರಂಭವಾಗಿದೆ. ತಾಡಪಾಲಿಗೆಹಣ ಜೋಡಿಸಬೇಕು. ಇಲ್ಲವಾದಲ್ಲಿ ಇರುವ ಬಳ್ಳಿ ನೆನೆದು ಹಾಳಾಗುತ್ತದೆ. ಕಾಯಿ ಬಿಡಿಸಲು ಪ್ರತಿ ಡಬ್ಬಕ್ಕೆ ₹ 30 ಕೊಡುತ್ತೇನೆ ಎಂದು ಹೇಳಿದರೂಕಾರ್ಮಿಕರು ಬರುತ್ತಿಲ್ಲ. ಯಂತ್ರದಿಂದ ಕಾಯಿ ಕಟಾವು ಮಾಡಿಸಿದಲ್ಲಿ ಮೇವಿಗೆ ತೊಂದರೆಯಾಗುತ್ತದೆ ಎಂದು ಹೆಚ್ಚು ಹಣ ನೀಡಿ ಕಾಯಿ ಬಿಡಿಸಿಕೊಳ್ಳಬೇಕಿದೆ’ ಎಂದು ಮೊಗಲಹಳ್ಳಿಯ ರೈತ ತಿಪ್ಪೇಸ್ವಾಮಿ ಕಷ್ಟ ಹೇಳಿಕೊಂಡರು.
‘ಸಮೀಕ್ಷೆ ನಡೆದಿದೆ’
ಸರ್ಕಾರ ಪೂರ್ವ ನಿಗದಿ ಮಾಡಿರುವ ಪಹಣಿ ಜಮೀನುಗಳಲ್ಲಿ ಬೆಳೆ ಕಟಾವು ವರದಿ ದಾಖಲಿಸಲಾಗುತ್ತಿದೆ. ಪ್ರತಿ ಪಂಚಾಯಿತಿಗೆ 5 ಕಡೆ ಸಂಗ್ರಹಮಾಡಲಾಗುವುದು. ವಿವಿಧ ಇಲಾಖೆಗಳಿಗೆ ಇದರ ಹೊಣೆ ವಹಿಸಲಾಗಿದೆ. 5/5 ಮೀಟರ್ ವಿಸ್ತಿರ್ಣದಲ್ಲಿನ ಇಳುವರಿಯನ್ನು ಪರಿಹಾರಕ್ಕೆ ಪರಿಗಣಿಸಲಾಗುತ್ತದೆ.ಎಲ್ಲಾ ಗ್ರಾಮಗಳಲ್ಲಿ ಕಡಿಮೆ ಇಳುವರಿ ಕಂಡುಬರುತ್ತಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೆಶಕ ಡಾ.ವಿ.ಸಿ. ಉಮೇಶ್ ಹೇಳಿದರು.
ಪರಿಹಾರ ನೀಡಲು ಒತ್ತಾಯ
ಕಳೆದ ವರ್ಷ ತಾಲ್ಲೂಕಿನ 16 ಗ್ರಾಮಪಂಚಾಯಿತಿ ಪೈಕಿ 3 ಪಂಚಾಯಿತಿಗಳನ್ನು ಮಾತ್ರ ಫಸಲ್ ಬಿಮಾ ಯೋಜನೆಗೆ ಪರಿಗಣಿಸಲಾಯಿತು.ಪ್ರತಿಭಟನೆಗಳನ್ನು ನಡೆಸಿದರು ಪ್ರಯೋಜನವಾಗಲಿಲ್ಲ. ತಾಂತ್ರಿಕ ಕಾರಣ ಮುಂದಿಡದೇ ಎಲ್ಲಾ ಪಂಚಾಯಿತಿಗಳನ್ನು ಈ ಬಾರಿ ಪರಿಗಣಿಸಬೇಕು.ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು. ಭರವಸೆ ನೀಡುವುದನ್ನು ಕೈಬಿಟ್ಟು ಈ ಬಗ್ಗೆ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದುರೈತರಾದ ಸುಂದರ್, ಷರಿಫ್ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.