ಸದ್ಧರ್ಮ ಸದನದ ಕೆಳ ಅಂತಸ್ತಿನಲ್ಲಿ ಕಾಶಿನಾಥಯ್ಯ ಶಿವನಗೌಡರ್– ರತ್ನಪ್ರಭಾ ದಂಪತಿ ವಾಸಿಸುತ್ತಿದ್ದರೆ ಮೇಲಂತಸ್ತು ಸಾಧು ಸಂತರಿಗೆ ಮೀಸಲಾಗಿದೆ. ಸ್ವಾಮೀಜಿಗಳು ಬಂದರೆ ಅವರ ವಾಸ್ತವ್ಯಕ್ಕಾಗಿ ಒಂದು ಕೊಠಡಿ ಅಡುಗೆ ಮನೆ ಪೂಜಾ ಮಂದಿರ ಭಕ್ತರಿಗೆ ದರ್ಶನ ಆಶೀರ್ವಾದ ಮಾಡಲು ಒಂದು ದೊಡ್ಡ ಹಜಾರವನ್ನು ಸಿದ್ಧಗೊಳಿಸಲಾಗಿದೆ. ‘ಸಾಧುಸಂತರ ಸೇವೆ ಮಾಡುವ ಕುಟುಂಬವದು. ಶ್ರೀಗಳು ಮನೆಗೆ ಬಂದರೆ ಕುಟುಂಬ ಸದಸ್ಯರು ಕಟ್ಟುನಿಟ್ಟಿನ ಮಡಿಯಲ್ಲಿ ಇದ್ದುಕೊಂಡು ಅಡುಗೆ ಮಾಡಿ ಬಡಿಸುತ್ತಿದ್ದರು. ಇಡೀ ಕುಟುಂಬದಲ್ಲಿ ಮುಗ್ಧತೆ ಇತ್ತು. ಭಕ್ತಿ ಮಾರ್ಗ ಬಿಟ್ಟು ಬೇರೇನೂ ತಿಳಿದವರಲ್ಲ. ಇಂತಹ ಕುಟುಂಬದಲ್ಲಿ ಹೀಗಾಗಬಾರದಾಗಿತ್ತು’ ಎಂದು ಕಾಶಿನಾಥಯ್ಯ ಶಿವನಗೌಡರ ಆತ್ಮೀಯರೊಬ್ಬರು ಬೇಸರ ವ್ಯಕ್ತಪಡಿಸಿದರು.