ಹಿರಿಯೂರು: ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡಿರುವುದು ನಾಯಕ ಸಮುದಾಯದ ಪರ್ಯಾಯ ಪದಗಳಾದ ಪರಿವಾರ, ತಳವಾರವೇ ಹೊರತು ಅಂಬಿಗರ ಸಮುದಾಯವಲ್ಲ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯಾಧ್ಯಕ್ಷ ಹರ್ತಿಕೋಟೆ ವೀರೇಂದ್ರಸಿಂಹ ತಿಳಿಸಿದ್ದಾರೆ.
‘ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ‘ಎಸ್ ಟಿ ಪಟ್ಟಿಗೆ ಸೇರ್ಪಡೆಯಾದ ತಳವಾರ ಮತ್ತು ಪರಿವಾರ ಸಮುದಾಯದ ಪ್ರಕಾರ ಶೇ 90ರಷ್ಟು ಅಂಬಿಗರಿಗೆ ಅನುಕೂಲ ಆಗುತ್ತದೆ. ಇನ್ನು ಮುಂದೆ ಅಂಬಿಗರೆಲ್ಲ ತಳವಾರ ಮತ್ತು ಪರಿವಾರ ಅಂತ ಬರೆಸಿ ಜಾತಿ ಪ್ರಮಾಣ ಪತ್ರ ಪಡೆಯಿರಿ ಎಂದು ನೀಡಿದ ಹೇಳಿಕೆ ಹರಿದಾಡಿರುವ ಹಿನ್ನೆಲೆಯಲ್ಲಿ ವೀರೇಂದ್ರಸಿಂಹ ಪ್ರಕಟಣೆಯಲ್ಲಿಸ್ಪಷ್ಟನೆ ನೀಡಿದ್ದಾರೆ.
‘ನಾಯಕ ಸಮುದಾಯದ ಅನೇಕ ಪಂಗಡಗಳು ಈಗಾಗಲೇ ಎಸ್ಟಿಗೆ ಸೇರ್ಪಡೆಯಾಗಿ ಇದರ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರ ಉಳಿದುಕೊಂಡಿದ್ದವು. ವಾಲ್ಮೀಕಿ ಸಮುದಾಯದ ನಿರಂತರ ಹೋರಾಟ, ವಾಲ್ಮೀಕಿ ಶ್ರೀಗಳು, ಸಚಿವ ಶ್ರೀರಾಮುಲು ಮತ್ತು ಮುಖಂಡರ ಮೇಲೆ ತಂದಿದ್ದ ಒತ್ತಡದ ಫಲವಾಗಿ ಪ್ರಯತ್ನದಿಂದ ಇವು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿವೆ’ ಎಂದು ತಿಳಿಸಿದ್ದಾರೆ.
‘ತಳವಾರ ಮತ್ತು ಪರಿವಾರ ಪದಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಅಧಿಸೂಚನೆ ಹೊರಡಿಸುವಂತೆಮೈಸೂರು–ಕೊಡಗು ಸಂಸದ ಪ್ರತಾಪಸಿಂಹ ಅವರು ಸಂಸತ್ತಿನಲ್ಲಿಒತ್ತಾಯಿಸಿದ್ದನ್ನು ಕಾರಜೋಳ ಅವರು ಗಮನಿಸಬೇಕು. ಜಾತಿ ಹುಟ್ಟಿನಿಂದ ಬರುವಂತಹದ್ದು. ಬರೆಯಿಸಿಕೊಂಡರೆ ಬರುವಂತದ್ದಲ್ಲ. ಅನೇಕ ಜಾತಿಗಳಲ್ಲಿ ತಳವಾರ ಪರಿವಾರ ಇದ್ದಾರೆ. ಅವರು ಯಾರೂ ಎಸ್ಟಿಗೆ ಬರುವುದಿಲ್ಲ. ಆದ್ದರಿಂದ ಡಿಸಿಎಂ ಆಡಿರುವ ಮಾತುಗಳನ್ನು ವಾಪಸ್ ಪಡೆದು ಸ್ಪಷ್ಟನೆ ನೀಡಬೇಕು ಇಲ್ಲದಿದ್ದರೆ ರಾಜ್ಯದಾದ್ಯಂತ ಎಸ್ಟಿ ಸಮುದಾಯ ಹೋರಾಟ ನಡೆಸಲಿದೆ’ ಎಂದು ಎಚ್ಚರಿಸಿದ್ದಾರೆ.
‘ದೇವದುರ್ಗ ತಾಲ್ಲೂಕಿನ ತಿಂಥಣಿಯಲ್ಲಿ ಹಮ್ಮಿಕೊಂಡಿದ್ದ ಹಾಲುಮತ ಸಮಾಜದ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಕುರುಬರು ಹಾಲುಮತ ಪಾಲುಮತ ಅಂತ ದಾಖಲಾತಿಯಲ್ಲಿ ಬರೆಸದೆ ಗೊಂಡ ಅಂತ ಬರೆಸಬೇಕು. ಇಲ್ಲದಿದ್ದರೆ ಎಸ್ಟಿ ಮೀಸಲಾತಿಯಿಂದ ವಂಚಿತರಾಗುತ್ತೀರಿವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ಎಂದು ನೇರವಾಗಿ ಕರೆ ನೀಡಿದ್ದರು. ಕುರುಬರು ಹಾಲುಮತದವರು ಬೇರೆ. ಗೊಂಡ ಸಮುದಾಯವೇ ಬೇರೆ. ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಎಸ್ ಟಿ ಸಮಾಜದದಿಂದ ಭಾರೀ ಪ್ರತಿರೋಧ ಬಂದಿದ್ದರಿಂದ ಅಂತಿಮವಾಗಿ ಅವರೇ ಸ್ಪಷ್ಟನೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಕಾರಜೋಳ ಅವರು ಕೂಡ ಅಂತಹ ಕೆಲಸ ಮಾಡಬೇಕು ಎಂದು ವೀರೇಂದ್ರಸಿಂಹ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.