ಮೊಳಕಾಲ್ಮುರು: ‘ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಅಧಿಕಾರದಲ್ಲಿದ್ದಾಗ ಮಾಡಿರುವ ಸಾಧನೆಗಳನ್ನು ಮೊದಲು ಬಹಿರಂಗ ಪಡಿಸಲಿ’ ಎಂದು ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಸವಾಲು ಹಾಕಿದರು.
ತಾಲ್ಲೂಕಿನ ಕಸಬಾ ಹೋಬಳಿ ಗ್ರಾಮಗಳಲ್ಲಿ ಶನಿವಾರ ನಡೆದ ಬಿಜೆಪಿ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.
‘4 ಬಾರಿ ಮೊಳಕಾಲ್ಮುರು ಕ್ಷೇತ್ರದ ಶಾಸಕರಾಗಿ ಗೋಪಾಲಕೃಷ್ಣ ಕೆಲಸ ಮಾಡಿದ್ದಾರೆ. ಯಾವುದೇ ಗುರುತರ ಸಾಧನೆಗಳನ್ನು ಮಾಡಿಲ್ಲ. 2013ರಲ್ಲಿ ಈ ಕ್ಷೇತ್ರದಿಂದ ಗೋಪಾಲಕೃಷ್ಣ ವಿರುದ್ಧ ನಾನು ಗೆದ್ದು ಶಾಸಕನಾಗಿದ್ದಾಗ ಸರ್ಕಾರದ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡಿಸಿಕೊಂಡು ಬರಲು ಅಡ್ಡಿಪಡಿಸಿದರು. ಕ್ಷೇತ್ರ ಮತ್ತು ಪಕ್ಷಗಳನ್ನು ಬದಲಾವಣೆ ಮಾಡಿ ಮತ್ತೆ ಈ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರಿಗೆ ನಿಮ್ಮ ಸಾಧನೆ ಏನು ಎಂಬುದನ್ನು ಮತದಾರರು ಪ್ರಶ್ನೆ ಮಾಡಬೇಕು’ ಎಂದರು.
ಗುಂಡ್ಲೂರು, ಕುಂಟೋಬಯ್ಯನಹಟ್ಟಿ, ಮೇಗಲ ಮರ್ಲಹಳ್ಳಿ, ಕೆಳಗಿನ ಮರ್ಲಹಳ್ಳಿ, ನೇರ್ಲಹಳ್ಳಿ, ಓದೋಬಯ್ಯನಹಟ್ಟಿ, ಬೆಳವಿನ ಮರದಹಟ್ಟಿ, ನೇತ್ರನಹಳ್ಳಿ, ಕೋನಸಾಗರ, ಊಡೇವು, ಮಾರಮ್ಮನಹಳ್ಳಿ, ಕೊಂಡ್ಲಹಳ್ಳಿಯಲ್ಲಿ ಪ್ರಚಾರ ಸಭೆಗಳನ್ನು ನಡೆಸಿದರು.
ಬಿಜೆಪಿ ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ. ಮಂಜುನಾಥ್, ರಾಮರೆಡ್ಡಿ, ಜಿಂಕಲು ಬಸವರಾಜ್, ಕಿರಣ್ ಗಾಯಕ್ ವಾಡ್, ಟಿ. ರೇವಣ್ಣ, ಸಿದ್ದಾರ್ಥ್, ಪಿ. ಪಾಲಯ್ಯ, ಕೆ.ಆರ್. ರಾಮರೆಡ್ಡಿ, ಶ್ರೀರಾಮರೆಡ್ಡಿ, ಕೆ.ಆರ್. ವೆಂಕಟೇಶ್ ಇದ್ದರು.