ಹೊಸದುರ್ಗ: ತಾಲ್ಲೂಕಿನ ಶೀರನಕಟ್ಟೆ ಗ್ರಾಮದಲ್ಲಿ ಹಣದ ವಿಚಾರವಾಗಿ ರಸ್ತೆಯಲ್ಲೇ ಅಳಿಯನೊಬ್ಬ ಅತ್ತೆ ಹಾಗೂ ಪತ್ನಿಗೆ ಚಾಕು ಇರಿದಿದ್ದು, ಅತ್ತೆ ಬುಧವಾರ ಮೃತಪಟಗಟಿದ್ದಾರೆ. ಅಳಿಯ ಶೇಷಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶೀರನಕಟ್ಟೆ ಕೋಡಿಹಟ್ಟಿ ಗ್ರಾಮದ ಕೆಂಚಮ್ಮ (54) ಕೊಲೆಯಾದವರು. ಶೇಷಪ್ಪ ಪತ್ನಿ ಲಾವಣ್ಯ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ನಿ ಹಾಗೂ ಅತ್ತೆ ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಶೇಷಪ್ಪ ಏಕಾಏಕಿ ಬಂದು ಹಣದ ವಿಚಾರಕ್ಕೆ ಜಗಳ ಆರಂಭಿಸಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಗುಲಿದಾಗ ಶೇಷಪ್ಪ ಪತ್ನಿ ಹಾಗೂ ಅತ್ತೆ ಕೆಂಚಮ್ಮಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ಇಬ್ಬರನ್ನೂ ದಾವಣಗೆರೆ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ತಡರಾತ್ರಿ ಕೆಂಚಮ್ಮ ಮೃತಪಟ್ಟಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.