ಮೂಡುಬಿದಿರೆ: ‘ವಚನಕಾರ ಜೇಡರ ದಾಸಿಮಯ್ಯ ಸರಳ ಭಾಷೆ ಬಳಸಿ ಅಷ್ಟೇ ಆಪ್ತವಾಗಿ, ವಿಶೇಷ ಅರ್ಥ ವ್ಯಾಪ್ತಿಯ ವಚನಗಳನ್ನು ರಚಿಸಿ ಮುಂದಿನ ವಚನಕಾರರಿಗೆ ಒಂದು ಪೀಠಿಕೆಯನ್ನು ನಿರ್ಮಿಸಿದವನು’ ಎಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ.ಕೃಷ್ಣರಾಜ ಕರಬ ಹೇಳಿದರು.
ಕಾಂತಾವರ ಅಲ್ಲಮಪ್ರಭು ಪೀಠದಲ್ಲಿ 'ಅನುಭವದ ನಡೆ ಅನುಭಾವದ ನುಡಿ'ಯ ನೂರನೇ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ವೈದಿಕ ಧರ್ಮವನ್ನು ಎಲ್ಲಿಯೂ ನೇರವಾಗಿ ಖಂಡಿಸದೆ ಸಂಘಟಿತ ಮನೋಭಾವದಿಂದ ಸಮಾನತೆಯ ನೆಲೆಯಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಶೈವ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಜೇಡರ ದಾಸಿಮಯ್ಯ ಮಾಡಿದ್ದಾನೆ’ ಎಂದು ಹೇಳಿದರು.
ಪೀಠದ ಸ್ಥಾಪಕ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ, ಪೀಠದ ವಿಶ್ವಸ್ಥ ಕಲ್ಲೂರು ನಾಗೇಶ್, ಪ್ರಧಾನ ನಿರ್ದೇಶಕ ಸತೀಶ್ ಕುಮಾರ್ ಕೆಮ್ಮಣ್ಣು , ಸದಾನಂದ ನಾರಾವಿ ಇದ್ದರು.