ಬೆಳ್ತಂಗಡಿ: ‘ಮೇ ದಿನ ಜಗತ್ತಿನ ಅತ್ಯಂತ ದೊಡ್ಡ ಶಕ್ತಿಯಾದ ದುಡಿಯುವ ಜನರ ದಿನವಾಗಿದ್ದು, ಕಾರ್ಮಿಕ ವರ್ಗಕ್ಕೆ ಹಕ್ಕು, ಶಕ್ತಿ ತುಂಬಿದ ದಿನವಾಗಿದೆ’ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟರು.
ಬೆಳ್ತಂಗಡಿಯಲ್ಲಿ ಸಿಐಟಿಯು ಬೆಳ್ತಂಗಡಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಬುಧವಾರ ನಡೆದ ಮೇ ದಿನಾಚರಣೆಯ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಕಾರ್ಮಿಕ ವರ್ಗದ ಹಕ್ಕು ಮತ್ತು ಸವಲತ್ತುಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಕಿತ್ತೆಸೆಯುತ್ತಾ ಬರುತ್ತಿದ್ದು ಇದು ಖಂಡನೀಯ ಎಂದರು.
ಆರು ವರ್ಷಗಳಿಂದ ಬಿಜೆಪಿಗೆ ಆರು ಶಾಸಕರನ್ನು ನೀಡಿದ್ದರೂ, 33 ವರ್ಷಗಳಿಂದ ಬಿಜೆಪಿ ಸಂಸದರೇ ಪ್ರತಿನಿಧಿಸುತ್ತಿದ್ದರೂ ಜಿಲ್ಲೆಯ ಬೀಡಿ ಕಾರ್ಮಿಕರ ದುಡಿದ ವೇತನ ಕೊಡಿಸಲಾಗುತ್ತಿಲ್ಲ. ಇಂಥ ಪ್ರತಿನಿಧಿಗಳಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ ಮುನೀರ್ ಕಾರ್ಪೊರೇಟ್ ಕಂಪನಿಗಳ ಪರವಾದ, ಕಾರ್ಮಿಕ ವರ್ಗ, ರೈತರ ವಿರೋಧಿ ಸರ್ಕಾರದ ವಿರುದ್ಧ ಹೋರಾಟಗಳು ನಡೆಯಬೇಕಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ನಾಯಕ ಬಿ.ಎಂ.ಭಟ್ ಮಾತನಾಡಿ, ‘ನರೇಂದ್ರ ಮೋದಿ ಸರ್ಕಾರ ಜನರನ್ನು ಮೌಢ್ಯದಲ್ಲಿ ಮುಳುಗಿಸಿ ಬಂಡವಾಳದಾರರ ಹಿತ ಕಾಪಾಡುಡುತ್ತಿದೆ. ಇಂತಹವರ ವಿರುದ್ಧ ಹೋರಾಡಲು ಮೇ ದಿನ ಸ್ಫೂರ್ತಿಯಾಗಲಿ’ ಎಂದರು.