ಮಂಗಳೂರು: ಒಂದು ಪ್ರದೇಶದ ಶ್ರೇಷ್ಠ ವ್ಯಕ್ತಿತ್ವಗಳನ್ನು ತಿಳಿಯವುದು ಎಂದರೆ ಅಲ್ಲಿನ ಸಾಂಸ್ಕೃತಿಕ ಖಜಾನೆಯನ್ನು ಅರಿಯುವುದಕ್ಕೆ ಸಮಾನ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾಲ್ ಸಲ್ಡಾನ ಅಭಿಪ್ರಾಯಪಟ್ಟರು.
ಸೇಂಟ್ ಅಲೋಶಿಯಸ್ ಪ್ರಕಾಶನ ಹೊರತಂದಿರುವ 'ಪ್ರೈಡ್ ಆಫ್ ಕೆನರಾ, ಟ್ರೂ ಸನ್ ಆಫ್ ಇಂಡಿಯಾ, ಫಾದರ್ ಜೆರೋಮ್ ಡಿ ಸೋಜ' ಕೃತಿಯನ್ನು ಸೋಮವಾರ ಬಿಡಗಡೆ ಮಾಡಿ ಅವರು ಮಾತನಾಡಿದರು.
ಜೆರೋಮ್ ಅವರು ಒಂದು ಪೆನ್ಸಿಲ್ನಂತೆ ಇದ್ದರು. ಒಳ್ಳೆಯದನ್ನೇ ಮಾಡಿದ ಅವರು ಪದೇ ಪದೇ ತಮ್ಮನ್ನು ಮೊನಚುಗೊಳಿಸುತ್ತ ಸಮಾಜಕ್ಕೆ ಅನುಕೂಲ ಆಗುವಂತೆ ಮಾಡಿಕೊಳ್ಳುತ್ತಿದ್ದರು. ನಾಡಿಗೆ ಗೌರವ ತಂದುಕೊಟ್ಟ ಅವರನ್ನು ಹೊರಜಗತ್ತಿಗೆ ತಿಳಿಸುವ ಅಗತ್ಯ ಇತ್ತು. ಆ ಕಾರ್ಯ ಈ ಪುಸ್ತಕದ ಮೂಲಕ ಆಗಿದೆ ಎಂದು ಅವರು ನುಡಿದರು.
ಜೆರೋಮ್ ಉತ್ಕೃಷ್ಟ ದೇಶಭಕ್ತರಾಗಿದ್ದರು. ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೊರಾಡಿದ್ದರು. ಅವರ ಬದುಕಿನಲ್ಲಿ ನಡೆದ ಅನೇಕ ಕುತೂಹಲಕಾರಿ ಘಟನಾವಳಿಗಳಿಗೆ ಈ ಪುಸ್ತಕ ಕನ್ನಡಿ ಹಿಡಿದಿದೆ. ಭಾರತದ ಸಂವಿಧಾನ ರಚನಾ ಸಮಿತಿಯ ಸದಸ್ಯರೂ ಆಗಿದ್ದ ಜೆರೋಮ್ ಕುರಿತ ಈ ಪುಸ್ತಕ ಓದುವ ಮೂಲಕ ಸಂವಿಧಾನದ ಒಳಗೆ ಪ್ರವೇಶಿಸಲು ಅವಕಾಶ ಆಗುತ್ತದೆ ಎಂದು ಬಿಷಪ್ ಹೇಳಿದರು.
ಮೂಲ್ಕಿ ಚರ್ಚ್ನ ಧರ್ಮಗುರು ಸಿಲ್ವಸ್ಟರ್ ಡಿ ಕೋಸ್ಟ ಮಾತನಾಡಿ ಮೂಲ್ಕಿಯ ಬಹುತೇಕ ಮಂದಿಗೆ ಫಾದರ್ ಜೆರೋಮ್ ಅವರ ಬಗ್ಗೆ ಗೊತ್ತಿಲ್ಲ. ಹೀಗಾಗಿ ಈ ಪುಸ್ತಕ ಪ್ರಕಟಿಸಿರುವುದು ಅಭಿನಂದನೀಯ ಎಂದರು.
ಜೆರೋಮ್ ಅವರ ಬದುಕಿನ ಮಹತ್ವದ ಘಟನೆಗಳೆಲ್ಲದಕ್ಕೂ ಆಗಸ್ಟ್ ತಿಂಗಳು ಸಾಕ್ಷಿಯಾಗಿದೆ. ಇದೇ ತಿಂಗಳಲ್ಲಿ ಈ ಕೃತಿ ಬಿಡುಗಡೆ ಆಗುತ್ತಿರುವುದು ಕಾಕತಾಳೀಯ ಎಂದು ಲೇಖಕ, ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರೊಫೆಸರ್ ಎಡ್ಮಂಡ್ ಫ್ರಾಂಕ್ ಹೇಳಿದರು.
ಕರ್ನಾಟಕ ಧರ್ಮಪ್ರಾಂತ್ಯದ ಅಪೋಸ್ಟೊಲಿಕ್ ಕಾರ್ಮೆಲ್ ಸಿಸ್ಟರ್ ಮರಿಯಾ ಶಮಿತಾ, ಜೆರೋಮ್ ಡಿ ಸೋಜ ಅವರ ಮರಿ ಮೊಮ್ಮಗ ಎಡ್ವಿನ್ ಡಿ ಸೋಜ, ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರಾಚಾರ್ಯ ಫಾದರ್ ಪ್ರವೀಣ್ ಮಾರ್ಟಿಸ್, ಸೇಂಟ್ ಅಲೋಶಿಯಸ್ ಪ್ರಕಾಶನದ ಸಂಚಾಲಕ ಆಲ್ವಿನ್ ಡೇಸಾ, ನಿರ್ದೇಶಕಿ ವಿದ್ಯಾ ವಿ. ಡಿಸೋಜ ಹಾಗೂ ಪತ್ರಕರ್ತ ರೊನಾಲ್ಡ್ ಫರ್ನಾಂಡಿಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.