ಮಂಗಳೂರು: ಲೇಖಕಿ ನಳಿನಾಕ್ಷಿ ಉದಯರಾಜ್ ರಚಿಸಿರುವ ‘ಬದುಕಿನ ಸತ್ಯಗಳು’ ಸಮಕಾಲೀನ ಚಿಂತನೆಗಳ ಸಂಕಲನವನ್ನು ಲೇಖಕಿ ಬಿ.ಎಂ.ರೋಹಿಣಿ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವನ್ನು ಲೇಖಕ ಸದಾನಂದ ನಾರಾವಿ ಇಲ್ಲಿ ಶನಿವಾರ ಬಿಡುಗಡೆ ಮಾಡಿದರು.
ಕರಾವಳಿ ಲೇಖಕಿಯರ - ವಾಚಕಿಯರ ಸಂಘ ಹಾಗೂ ಬೆಂಗಳೂರಿನ ವಸಂತಪುರದ ಸುಶಾಂತ ಪ್ರಕಾಶನದ ಆಶ್ರಯದಲ್ಲಿ ಏರ್ಪಡಿಸಿದ್ದ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿದ ಲೇಖಕ ಮುದ್ದು ಮೂಡುಬೆಳ್ಳೆ, ‘ಈ ಎರಡೂ ಕೃತಿಗಳು ಬದುಕಿನ ಸತ್ಯಗಳೊಂದಿಗೆ ಸಾರ್ವಕಾಲಿಕ ಸತ್ಯಗಳನ್ನು ಅನಾವರಣಗೊಳಿಸಿವೆ. ಜೀವನಾನುಭವದ ಸಂದೇಶಗಳನ್ನೊಳಗೊಂಡ ಅಂಕಣ ಬರಹಗಳನ್ನು ಕೃತಿ ರೂಪಕ್ಕಿಳಿಸಿದರೆ ಹೆಚ್ಚು ಜನರನ್ನು ತಲುಪಬಹುದು’ ಎಂದರು.
ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳ್ಯಾರು ಅಧ್ಯಕ್ಷತೆ ವಹಿಸಿದ್ದರು.
ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಮತ್ತು ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕೃತಿ ಪರಿಚಯ ಮಾಡಿದರು. ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಸುಕುಮಾರ್ ಕುಂಬಳೆ , ಸುಶಾಂತ ಪ್ರಕಾಶನದ ಸುಶಾಂತ್ ರಾಜ್ ಭಾಗವಹಿಸಿದ್ದರು.
ಕೃತಿಗಳ ಲೇಖಕಿ ನಳಿನಾಕ್ಷಿ ಉದಯರಾಜ್ ಸ್ವಾಗತಿಸಿದರು. ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ ಆಶಯ ಗೀತೆ ಹಾಡಿದರು. ವಿಜಯಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಅನಿಕೇತ್ ಧನ್ಯವಾದ ಸಲ್ಲಿಸಿದರು.