ಮಂಗಳೂರು: ಗೌಡ ಸಾರಸ್ವತ ಸಮಾಜದ ಕಾಶೀಮಠ ಸಂಸ್ಥಾನದ ಮಠಾಧೀಶ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತವು ನಗರದ ಕೊಂಚಾಡಿ ಕ್ಷೇತ್ರದ ಕಾಶೀಮಠದ ಶಾಖಾಮಠದಲ್ಲಿ ಶುಕ್ರವಾರ ಮೃತಿಕಾ ಪೂಜನೆಯೊಂದಿಗೆ ಪ್ರಾರಂಭವಾವಾಯಿತು.
ಪ್ರಾತಃಕಾಲ ಸಂಸ್ಥಾನದ ದೇವರುಗಳಿಗೆ ಪಂಚಾಮೃತ, ಗಂಗಾಭಿಷೇಕ, ಲಘು ವಿಷ್ಣು ಅಭಿಷೇಕ, ಶತಕಲಶಾಭಿಷೇಕ ಬಳಿಕ ಪವಮಾನ ಅಭಿಷೇಕಗಳು ಶ್ರೀಗಳಿಂದ ನೆರವೇರಿದವು. ಸಂಜೆ ಮೃತಿಕಾ ಪೂಜನೆ ಬಳಿಕ ಸಭಾ ಕಾರ್ಯಕ್ರಮ ಜರುಗಿತು.
ಸಮಾಜದವರಿಗೆ ಪಾಲ್ಗೊಳ್ಳುವ ಅಥವಾ ಭಾಗವಹಿಸುವ ಅವಕಾಶವಿರುವುದಿಲ್ಲ. ಚಾತುರ್ಮಾಸ್ಯ ವ್ರದ ಪ್ರಯುಕ್ತ ಸಂಯಮೀಂದ್ರ ತೀರ್ಥರು ಜೂನ್ 30 ರಂದು ಕೊಂಚಾಡಿ ಶಾಖಾಮಠ ತಲುಪಿದ್ದರು. ಆ ಸಂದರ್ಭದಲ್ಲಿ ಶಾಖಾಮಠದ ವ್ಯವಸ್ಥಾಪಕ ಸಮಿತಿ, ವೈದಿಕರಿಂದ ಪೂರ್ಣ ಕುಂಭ ಸ್ವಾಗತ ನೀಡಲಾಗಿತ್ತು.
ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಎಲ್ಲರ ಹಿತದೃಷ್ಟಿಯಿಂದ ಈ ಬದಲಾವಣೆ ಮಾಡಲಾಗಿದ್ದು, ಭಕ್ತಾದಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸುವಂತೆ ಚಾತುರ್ಮಾಸ್ಯ ಸಮಿತಿಯ ಡಿ.ವಾಸುದೇವ್ ಕಾಮತ್ ಮತ್ತು ಕಸ್ತೂರಿ ಸದಾಶಿವ ಪೈ ಮನವಿ ಮಾಡಿದ್ದಾರೆ.