ಕಾವುದಲ್ಲಿ ಚಾಕೊಲೇಟ್ ಪಾರ್ಕ್: ಕೊಡ್ಗಿ

ಮಂಗಳೂರು: ನಗರದ ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ಕ್ಯಾಂಪ್ಕೊದ 49 ನೇ ಸ್ಥಾಪನಾ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಕ್ಯಾಂಪ್ಕೊ ಮಾಜಿ ಉಪಾಧ್ಯಕ್ಷ ವಿ.ಕೃಷ್ಣ ಭಟ್ ಮಾತನಾಡಿ, ಸಂಸ್ಥೆಯ ಸ್ಥಾಪಕಾಧ್ಯಕ್ಷ ದಿ. ವಾರಣಾಶಿ ಸುಬ್ರಾಯ ಭಟ್ ಅವರನ್ನು ಮತ್ತು ಸಂಸ್ಥೆಯ ಸ್ಥಾಪನೆಯ ಸಂದರ್ಭದಲ್ಲಿ ಎದುರಿಸಿದ ಸವಾಲುಗಳನ್ನು ನೆನಪಿಸಿಕೊಂಡರು. ಕ್ಯಾಂಪ್ಕೊ ಕೊಕ್ಕೊದ ವೈವಿಧ್ಯಮಯ ಉತ್ಪನ್ನಗಳನ್ನು ಉತ್ಪಾದಿಸುವ ಬಗ್ಗೆ ಆಲೋಚಿಸಬೇಕಿದೆ ಎಂದು ಹೇಳಿದರು.
ಗುಜರಾತಿನ ಜುನಾಗಡ್ ಜಿಲ್ಲೆಯಲ್ಲಿ ಕ್ಯಾಂಪ್ಕೊದ 14ನೇ ಸೇಲ್ಸ್ ಡಿಪೊ ಉದ್ಘಾಟಿಸಲಾಯಿತು. ಕ್ಯಾಂಪ್ಕೊದ ನೂತನ ಹಲಸಿನಹಣ್ಣಿನ ಎಕ್ಲೇರ್ ಚಾಕೊಲೇಟ್ ಮತ್ತು ಹೇಸೆಲ್ ನಟ್ ಚೊಕೊ ಸ್ಪ್ರೆಡ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಸಂಸ್ಥೆಯ ಮುಂದಿನ ಯೋಜನೆಗಳನ್ನು ಪ್ರಸ್ತಾಪಿಸಿ, ಕೋಮಲೆ ಗಣಪತಿ ಭಟ್ ಅವರ ಪ್ರಯತ್ನ, ಆವಿಷ್ಕಾರಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು.
ಪುತ್ತೂರಿನ ಕಾವುದಲ್ಲಿ ನಿರ್ಮಿಸಿರುವ ಗೋದಾಮಿನ ಆವರಣದಲ್ಲಿ ಚಾಕೊಲೇಟ್ ಪಾರ್ಕ್ ಸ್ಥಾಪನೆ, ಕೇಂದ್ರ ಸರ್ಕಾರದಿಂದ ಅಡಿಕೆಗಾಗಿ ಅನುದಾನದ ಬೇಡಿಕೆ ಮುಂದಿರಿಸುವುದಾಗಿ ತಿಳಿಸಿದ ಅವರು, ಸಂಸ್ಥೆಯ ಸ್ಥಾಪಕಾಧ್ಯಕ್ಷ ದಿ.ವಾರಣಾಶಿ ಸುಬ್ರಾಯ ಭಟ್ ಅವರಿಗೆ ಮರಣೋತ್ತರ ಪದ್ಮ ಪ್ರಶಸ್ತಿಯನ್ನು ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ಅಡಿಕೆಯ ಭವಿಷ್ಯದ ಮೇಲಿರುವ ನಿಷೇಧದ ತೂಗುಕತ್ತಿಯನ್ನು ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಸಂಸ್ಥೆ ಕೈಗೊಳ್ಳಲಿದೆ. ಸಂಸ್ಥೆಯು ತನ್ನೆಲ್ಲ ವ್ಯವಹಾರಗಳನ್ನೂ ಕಾನೂನಿನ ಚೌಕಟ್ಟಿನೊಳಗೆ ಮಾಡಲಿದ್ದು, ಎಲ್ಲರ ಸಹಕಾರವನ್ನು ಬಯಸಲಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾಂಪ್ಕೊ ಉಪಾ ಧ್ಯಕ್ಷ ಶಂ.ನಾ. ಖಂಡಿಗೆ, ಸಂಸ್ಥೆಯ ನಿರ್ದೇಶಕರು, ಸಂಸ್ಥೆಯ ಲೆಕ್ಕ ಪರಿಶೋ ಧಕರು ಇದ್ದರು. ಮಹಾಪ್ರಬಂಧಕಿ ರೇಷ್ಮಾ ಮಲ್ಯ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.