ಮಂಗಳೂರು: ಕರಾವಳಿಯ ಕ್ರೀಡೆಯಾದ ಕಂಬಳ ಈ ಬಾರಿ ನಡೆಯುತ್ತದೆಯೋ ಇಲ್ಲವೋ ಎನ್ನುವ ಗೊಂದಲ ಇನ್ನೂ ಮುಂದುವರಿದಿದೆ. ನವೆಂಬರ್ನಿಂದ ಮಾರ್ಚ್ವರೆಗೆ ಕಂಬಳ ನಡೆಯುತ್ತಿದ್ದು, ಈ ಬಾರಿ ಇನ್ನೂ ಸಿದ್ಧತೆಗಳೂ ಆರಂಭವಾಗದಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
ನಾಲ್ಕನೇ ಹಂತದ ಅನ್ಲಾಕ್ನಲ್ಲಿ 100ಕ್ಕಿಂತ ಕಡಿಮೆ ಜನರೊಂದಿಗೆ ಕಾರ್ಯಕ್ರಮ ಮಾಡಲು ಅನುಮತಿ ನೀಡಿದೆ. ಆದರೆ, ಕಂಬಳದಲ್ಲಿ ಜನರ ಪಾಲ್ಗೊಳ್ಳುವಿಕೆ, ಸುರಕ್ಷಿತ ಅಂತರ ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟಕರವಾಗಿ ಪರಿಣಮಿಸಿದೆ.
‘ಕಂಬಳದಲ್ಲಿ ಸರ್ಕಾರ ಮಾರ್ಗಸೂಚಿ ಪಾಲನೆ ಕಷ್ಟವಾಗಿದ್ದು, ಈ ಋತುವಿನ ಕಂಬಳದ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಬರುವ ದಿನಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಕೈಗೊಳ್ಳುವ ನಿರ್ಧಾರ ನೋಡಿಕೊಂಡು ಮುಂದಿನತೀರ್ಮಾನ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ 30 ರಂದು ಬಂಟ್ವಾಳ ತಾಲ್ಲೂಕಿನ ಹೊಕ್ಕಾಡಿಗೋಳಿಯ ಕಂಬಳದೊಂದಿಗೆ ಆರಂಭವಾಗಿದ್ದ ಋತು, ಮಾರ್ಚ್ 15ರಂದು ನಡೆದ ಬಂಗಾಡಿ ಕಂಬಳದೊಂದಿಗೆ ಮುಕ್ತಾಯವಾಗಿತ್ತು. ಕಟಪಾಡಿ, ತಲಪಾಡಿ, ತಿರುವೈಲು ಕಂಬಳಗಳು ನಡೆದಿರಲಿಲ್ಲ.