ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಝಿಲ್‌ ಹತ್ಯೆ ಮರು ತನಿಖೆಗೆ ಡಿವೈಎಫ್ಐ ಆಗ್ರಹ

ಜನಾಂಗ ಹತ್ಯೆಗೆ ಶರಣ್ ಪಂಪ್‌ವೆಲ್‌ ಪ್ರಚೋದನೆ: ಮುನೀರ್‌ ಕಾಟಿಪಳ್ಳ
Last Updated 29 ಜನವರಿ 2023, 16:06 IST
ಅಕ್ಷರ ಗಾತ್ರ

ಮಂಗಳೂರು: ‘ನಮ್ಮ ಹುಡುಗರು ಎಲ್ಲರ ಎದುರೇ ಶೌರ್ಯದಿಂದ ನುಗ್ಗಿ ಫಾಝಿಲ್ ಕೊಲೆ ಮಾಡಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪ್‌ವೆಲ್ ಹೇಳಿದ್ದಾರೆ. ಇನ್ನಷ್ಟು ಇಂತಹ ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ. ಗುಜರಾತ್‌ನಲ್ಲಿ ನಡೆದ 2 ಸಾವಿರ ಜನರ ಹತ್ಯೆಗಳನ್ನೂ ಸಮರ್ಥಿಸಿಕೊಂಡಿದ್ದಾರೆ. ನಾಗರಿಕ ಸಮಾಜದಲ್ಲಿ ಇದು ಭೀತಿಯನ್ನು ಮೂಡಿಸಿದೆ’ ಎಂದು ಡಿವೈಎಫ್‌ಐ ಕಳವಳ ವ್ಯಕ್ತಪಡಿಸಿದೆ.

ಕೊಲೆ, ನರಮೇಧದ ಸಮರ್ಥನೆಯ ಭಾಷಣ ಮಾಡಿದ ಶರಣ್ ಅವರನ್ನು ಬಂಧಿಸಬೇಕು. ಫಾಝಿಲ್ ಕೊಲೆಯಲ್ಲಿ ಶರಣ್ ಹಾಗೂ ಇತರ ನಾಯಕರ ಪಾತ್ರದ ಕುರಿತು ಮರುತನಿಖೆ ಮಾಡಬೇಕು ಎಂದು ಸಂಘಟನೆ ಆಗ್ರಹಿಸಿದೆ.

‘ಶರಣ್ ಪಂಪ್‌ವೆಲ್ ಅವರ ಅತಿರೇಕದ ದ್ವೇಷ ಭಾಷಣ, ಕೊಲೆಗಳ ಸಮರ್ಥನೆ, ಬೆದರಿಕೆ ಜನಾಂಗ ಹತ್ಯೆಗೆ ಪ್ರಚೋದನೆ ನೀಡುವಂತಿದೆ‌. ನಿರುದ್ಯೋಗ, ಬಡತನದಿಂದ ಹತಾಶಗೊಂಡಿರುವ ಯುವಕರ ಕೈಗೆ ತಲವಾರು ನೀಡಿ ಗಲಭೆಗಿಳಿಸುವ, ಇಡೀ ಸಮಾಜವನ್ನು ಅಪರಾಧೀಕರಣಗೊಳಿಸುವ, ಚುನಾವಣೆ ಸನಿಹದಲ್ಲಿರುವ ಸಂದರ್ಭ ಮತೀಯ ಧ್ರುವೀಕರಣ ರಾಜಕೀಯ ದುರುದ್ದೇಶಗಳನ್ನು ಹೊಂದಿದೆ. ಹಾಗೂ ಶರಣ್ ಪಂಪ್ ವೆಲ್ ಗೆ ಬಿಜೆಪಿ ಸರಕಾರದ ಬೆಂಬಲವೂ ದೊರಕಿರುವುದು ಎದ್ದು ಕಾಣುತ್ತಿದೆ‘ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ತಿಳಿಸಿದ್ದಾರೆ.

‘ಫಾಝಿಲ್ ಕೊಲೆಗೆ ವಿಎಚ್‌ಪಿ, ಬಿಜೆಪಿ ಮುಖಂಡರ ಬೆಂಬಲ ದೊರಕಿರುವ ಅನುಮಾನ ಕೊಲೆ ನಡೆದ ಸಂದರ್ಭದಲ್ಲೇ ವ್ಯಕ್ತವಾಗಿತ್ತು. ಪೊಲೀಸರು ರಾಜಕೀಯ ಒತ್ತಡದಿಂದ ಕೊಲೆಯ ಪಿತೂರಿದಾರರನ್ನು ರಕ್ಷಿಸುತ್ತಿದ್ದಾರೆ ಎಂದು ಫಾಝಿಲ್ ಕುಟುಂಬ ಆರೋಪಿಸಿತ್ತು. ಶರಣ್ ಪಂಪ್ ವೆಲ್ ಭಾಷಣ ಈ ಅನುಮಾನ, ಆರೋಪವನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಪುಷ್ಟೀಕರಿಸಿದೆ‘ ಎಂದು ಹೇಳಿದ್ದಾರೆ.

‘ಅಮಾಯಕ ಫಾಝಿಲ್ ಕೊಲೆಯಾದ ಸಂದರ್ಭ ರಾಜ್ಯ ಸರ್ಕಾರ ಸಾಂತ್ವನ ಹೇಳಲಿಲ್ಲ. ಪರಿಹಾರ ಒದಗಿಸದೇ ಸಂತ್ರಸ್ತ ಕುಟುಂಬಕ್ಕೆ ತಾರತಮ್ಯವೆಸಗಿದೆ. ಪ್ರಕರಣದ ತನಿಖೆಯೂ ದುರ್ಬಲವಾಗಿ ನಡೆದಿದೆ. ಈಗ ಫಾಝಿಲ್ ಕೊಲೆಯನ್ನು ಬಜರಂಗ ದಳದ ಕಾರ್ಯಕರ್ತರ ಶೌರ್ಯದ ಸಂಕೇತ ಎಂದು ಭಾಷಣ ಬಿಗಿಯಲು‌ ಅವಕಾಶ ಒದಗಿಸಿ ಆ ಸಂತ್ರಸ್ತ ಕುಟುಂಬವನ್ನು ಮತ್ತಷ್ಟು ನೋವುಣ್ಣುವಂತೆ ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯದ ವಿರುದ್ದ ಇನ್ನಷ್ಟು ದ್ವೇಷ ಹರಡುವ ಯತ್ನವೂ ಇದರ ಹಿಂದಿದೆ. ಸರ್ಕಾರಿ ಪ್ರಾಯೋಜಿತ ಇಂತಹ ಯೋಜನಾಬದ್ದ ಜನಾಂಗ ದ್ವೇಷದ ಕೆಲಸಗಳು ಮುಸ್ಲಿಂ ಸಮುದಾಯದೊಳಗೆ ನಕಾರಾತ್ಮಕ ಶಕ್ತಿಗಳ ಬೆಳವಣಿಗೆಗೂ ಕುಮ್ಮಕ್ಕು‌ ನೀಡುತ್ತವೆ. ಇದು ಸಮಾಜವನ್ನು ಅಪಾಯಕಾರಿ ವಿಭಜನೆಯೆಡೆಗೆ ಒಯ್ಯುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ನಾಗರಿಕ ಸಮಾಜ ಒಂದಾಗಿ ಶರಣ್ ಪಂಪ್ ವೆಲ್ ಭಾಷಣವನ್ನು ಖಂಡಿಸಬೇಕು ಹಾಗೂ ಕ್ರಮಕ್ಕಾಗಿ ಒತ್ತಾಯಿಸಬೇಕು’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT