ಮಂಗಳೂರು: ಚುನಾವಣಾ ಬಾಂಡ್ ರಾಜಕೀಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನಟ, ರಂಗಕರ್ಮಿ ಪ್ರಕಾಶ್ ರಾಜ್ ದೂರಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಚುನಾವಣಾ ಬಾಂಡ್ ವಿಷಯದಲ್ಲಿ ಪ್ರಧಾನ ಮಂತ್ರಿ ಮತ್ತು ಗೃಹಸಚಿವರು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ನಲ್ಲಿ ಈ ಲೂಟಿ ಬಗ್ಗೆ ಯಾಕೆ ಹೇಳಲಿಲ್ಲ ಎಂದು ಪ್ರಶ್ನಿಸಿದರು.
ನಾವು ₹ 6000 ಕೋಟಿ ತೆಗೆದುಕೊಂಡಿದ್ದೇವೆ, ಆದರೆ, 330 ಸಂಸದರು ಇದ್ದಾರೆ. ಕಡಿಮೆ ಸಂಸದರು ಇರುವ ಪಕ್ಷಗಳು ಜಾಸ್ತಿ ತೆಗೆದುಕೊಂಡಿದ್ದಾರೆ ಎನ್ನುತ್ತಾರೆ. ಇದರರ್ಥ ಏನು? ಹೆಚ್ಚು ತೆಗೆದುಕೊಂಡು ಹಂಚಿಕೊಂಡರೆ ಶಿಕ್ಷೆ ಕಡಿಮೆ ಆಗಬೇಕೆಂದೇ ಎಂದು ಅವರು ಕೇಳಿದರು.
ಡಿಎಂಕೆಯವರು ಲಾಟರಿ ಏಜೆಂಟ್ ಮಾರ್ಟಿನ್ ಅವರಿಂದ ಚುನಾವಣಾ ಬಾಂಡ್ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಪ್ರಧಾನಮಂತ್ರಿ ಹೇಳಲು ಸಿದ್ದರಿಲ್ಲ. ಚುನಾವಣೆಗೆ ಹಣ ಬೇಕೆಂದು ಬಾಂಡ್ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವುದೇ? ಇದು ಪ್ರಪಂಚದ ದೊಡ್ಡ ಹಗರಣ. ನೀವು ಈ ಹಣದಿಂದಲೇ ಶಾಸಕರನ್ನು ಕೊಂಡುಕೊಳ್ಳುತ್ತೀರಾ? ಬಗೆಬಗೆಯ ಪೋಷಾಕಿಗೂ ಈ ಹಣವನ್ನು ಬಳಸಿಕೊಳ್ಳುತ್ತೀರಾ ಎಂದು ಪ್ರಕಾಶ್ ರಾಜ್ ಕೇಳಿದರು.
ಲೋಕಸಭೆ ಚುನಾವಣೆಯಲ್ಲಿ ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಆಳುವ ಪಕ್ಷವನ್ನು ಪ್ರಶ್ನಿಸುವುದಷ್ಟೆ ನನ್ನ ಕೆಲಸ. ಜನರೂ ಅಷ್ಟೇ, ಪಕ್ಷ ನೋಡಿ ಮತ ಹಾಕಬಾರದು. ನಿಮಗೆ ಸಿಗುವ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು.
ಚುನಾವಣಾ ಸಮೀಕ್ಷೆಯೂ ವ್ಯಾಪಾರ ಆಗಿದೆ. ಹಣ ಕೊಟ್ಟು ಮಾಡಿಸುತ್ತಿದ್ದಾರೆ ಎಂಬ ಸಂದೇಹ.ಮೂಡುತ್ತದೆ ಎಂದರು.