ಮಂಗಳೂರು: ‘ಸಿಟಿ ಬಸ್ಗಳಿಗೆ 15 ದಿನಗಳ ಒಳಗೆ ಜಿಪಿಎಸ್ ಅಳವಡಿಕೆ ಕಡ್ಡಾಯ. ತಪ್ಪಿದ್ದಲ್ಲಿ ಅಂತಹ ಬಸ್ಗಳ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
’ಸಿಟಿ ಬಸ್ಗಳಿಗೆ ಜಿಪಿಎಸ್ ಅಳವಡಿಸುವಂತೆ ಈಗಾಗಲೇ ಹಲವು ಬಾರಿ ಸೂಚನೆ ನೀಡಲಾಗಿದೆ. ಇನ್ನು ಗಡುವು ವಿಸ್ತರಿಸಲು ಸಾಧ್ಯವೇ ಇಲ್ಲ. 15 ದಿನಗಳ ಒಳಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದರು.
’ಮಂಗಳೂರು ನಗರದಲ್ಲಿ ಒಟ್ಟು 320 ಸಿಟಿ ಬಸ್ಗಳಿವೆ. ಅವುಗಳಲ್ಲಿ 70 ಬಸ್ಗಳಿಗೆ ಮಾತ್ರ ಜಿಪಿಎಸ್ ಅಳವಡಿಸಲಾಗಿದೆ’ ಎಂದು ಸಾರಿಗೆ ಅಧಿಕಾರಿ ಮಾಹಿತಿ ನೀಡಿದರು.
’ಜಿಪಿಎಸ್ ಅಳವಡಿಸುವ ಕುರಿತು ಈಗಾಗಲೇ ಬಸ್ ಮಾಲೀಕರಿಗೆ ಮಾಹಿತಿ ನೀಡಲಾಗಿದೆ’ ಎಂದು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಹೇಳಿದರು.
‘ನಗರದಲ್ಲಿ ಸಂಚರಿಸುವ ವಾಹನಗಳ ವರ್ಷವಾರು ಪಟ್ಟಿಯನ್ನು ಸಾರಿಗೆ ಇಲಾಖೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. 5 ರಿಂದ 10 ವರ್ಷದೊಳಗಿನ ಮತ್ತು 10 ರಿಂದ 15 ವರ್ಷದೊಳಗಿನ ವಾಹನಗಳು ಎಷ್ಟಿವೆ ಎಂಬ ಮಾಹಿತಿಯನ್ನು ನೀಡಬೇಕು. ವಾಹನಗಳಿಗೆ ಕ್ಷಮತಾ ಪತ್ರ ನೀಡುವಾಗ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಮಂಗಳೂರು ಆರ್ಟಿಒ ವರ್ಣೇಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಮಹಾನಗರ ಪಾಲಿಕೆ ಉಪ ಆಯುಕ್ತ ಸಂತೋಷ್ ಕುಮಾರ್ ಇದ್ದರು.
ಆಟೊ ರಿಕ್ಷಾ ಪರವಾನಗಿ ನವೀಕರಣ, ಹೊಸ ರಿಕ್ಷಾ ಖರೀದಿಗೆ ಪರವಾನಗಿ ಸೇರಿದಂತೆ ಆಟೊ ರಿಕ್ಷಾ ಚಾಲಕರ ಸಮಸ್ಯೆಗಳ ಕುರಿತು ಸಾರಿಗೆ ಇಲಾಖೆ ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಸಭೆ ನಡೆಸಬೇಕು ಡಾ.ಕೆ.ವಿ ರಾಜೇಂದ್ರ, ಜಿಲ್ಲಾಧಿಕಾರಿ