ಮಂಗಳೂರು: ನಗರದ ವಿವಿಧೆಡೆ ಅಕ್ರಮವಾಗಿ ವಾಸವಿದ್ದ ಶ್ರೀಲಂಕಾದ 38 ಜನರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಮಿಳುನಾಡಿನ ಮೂಲಕ ನಗರಕ್ಕೆ ಬಂದಿರುವ ಕುರಿತು ತಮಿಳುನಾಡು ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ನಗರದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಶುಕ್ರವಾರ ಮೂರು ಕಡೆಗಳಲ್ಲಿ ವಾಸವಾಗಿದ್ದ 38 ಜನರನ್ನು ವಶಕ್ಕೆ ಪಡೆದಿದ್ದರು.
ತಮಿಳುನಾಡಿನ ಡಿಎಸ್ಪಿ ಹಾಗೂ ಇನ್ಸ್ಪೆಕ್ಟರ್ ನೇತೃತ್ವದ ತಂಡ ನಗರಕ್ಕೆ ಬಂದಿದ್ದು, ತನಿಖೆಗೆ ಅಗತ್ಯ ಸಹಕಾರ ನೀಡುತ್ತಿದೆ. ಪ್ರಕರಣದ ಕುರಿತು ವಿದೇಶಾಂಗ ಸಚಿವಾಲಯಕ್ಕೂ ಮಾಹಿತಿ ರವಾನಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.