ಪೂಕರೆಗೆ ಮೊದಲು ಕಂಬಳದ ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡಿ ಹದಮಾಡಿ ಇಡಲಾಗುತ್ತದೆ. ಪೂಕರೆ ನಡೆಯುವ ದಿನ ಬೆಳಿಗ್ಗೆ ಗ್ರಾಮಕ್ಕೆ ಸಂಬಂಧಪಟ್ಟ ವಿಶ್ವಕರ್ಮರು ಕಾವೆರ ಮನೆಗೆ ಬಂದು ಒಂದು ಅಡಿಕೆ ಮರವನ್ನು ಕಡಿದು ಅದರಿಂದ ಪೂಕರೆಯನ್ನು ನಿರ್ಮಿಸುತ್ತಾರೆ. ಪೂಕರೆಯ ತುದಿಗೆ ಹಲಸಿನ ಮರದಿಂದ ತಯಾರಿಸಿದ ಶಿಖರ ಇಟ್ಟು, ಕೇಪಳದ ಹೂ ಮತ್ತು ಹಿಂಗಾರದಿಂದ ಅದನ್ನು ಶೃಂಗಾರ ಮಾಡಲಾಗುತ್ತದೆ. ನಾಲ್ಕು ಕಡೆಗಳ ಗುರಿಕಾರರು, ಕ್ಷೇತ್ರಕ್ಕೆ ಸಂಬಂಧಪಟ್ಟವರು ಮತ್ತು ಗ್ರಾಮಸ್ಥರು ಕಾವೆರ ಮನೆಗೆ ಬರುತ್ತಾರೆ. ಬಂದ ಎಲ್ಲಾ ಜನರಿಗೂ ವೀಳ್ಯದೆಲೆ ಮತ್ತು ಅಡಿಕೆ ಕೊಟ್ಟು ಸ್ವಾಗತಿಸಲಾಗುತ್ತದೆ. ದೈವದ ಮುಂದೆ ಎಲ್ಲರೂ ನಿಂತು ಪ್ರಾರ್ಥನೆ ಮಾಡುತ್ತಾರೆ. ನಂತರ ವಾದ್ಯ, ಬ್ಯಾಂಡ್, ಡೋಲು ವಾದನದೊಂದಿಗೆ ಎಲ್ಲಾ ಜಾತಿಯವರು ಸೇರಿ ಪೂಕರೆಯನ್ನು ಹೆಗಲಲ್ಲಿ ಹೊತ್ತಕೊಂಡು ಕಂಬಳದ ಗದ್ದೆಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಇರುವ ಏಕಶಿಲಾ ದಂಬೆಕಲ್ಲಿಗೆ ಇಟ್ಟು ಪ್ರದಕ್ಷಿಣೆ ಹಾಕುತ್ತಾರೆ. ನಂತರ ಪೂಜೆ ಸಲ್ಲಿಸಿ ಪೂಕರೆಯನ್ನು ನೇರವಾಗಿ ದಂಬೆಕಲ್ಲಿನಲ್ಲಿ ನೆಡಲಾಗುತ್ತದೆ. ನಂತರ ಅತಿಕಾರ ಬಿದೆಯ ನೇಜಿಯನ್ನು ಗದ್ದೆಗೆ ನೆಡಲಾಗುತ್ತದೆ ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆಯು ನಡೆಯುತ್ತದೆ.