ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲ್ಲೂಕು ಘಟಕದ ಸಂಸ್ಥಾಪನಾ ದಿನಾಚರಣೆಯು ಚೇಳ್ಯಾರು ಖಂಡಿಗೆ ನಾಟ್ಯಾಂಜಲಿ ಕಲಾ ಅಕಾಡೆಮಿ ನಾಟ್ಯಾಂಜಲಿ ಕಲಾ ಮಂದಿರದಲ್ಲಿ ಜರುಗಿತು.
ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ. ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ‘ಪ್ರತಿಯೊಬ್ಬ ಕನ್ನಡಿಗನಿಗೂ ಕರ್ತವ್ಯ ಪ್ರಜ್ಞೆ ಇರಬೇಕು. ಕನ್ನಡ ಭಾಷೆಯಲ್ಲಿ ಮಾತನಾಡುವಾಗ ನಮ್ಮಲ್ಲಿ ಭಾಷಾ ಜ್ಞಾನ ಇರಬೇಕು. ಜನಸಾಮಾನ್ಯರು ಯಾವುದೇ ಭಾಷೆಯಲ್ಲಿ ಮಾತನಾಡಲಿ, ಭಾಷಾಶುದ್ಧಿಯ ಬಗ್ಗೆ ಗಮನ ಹರಿಸಬೇಕು. ಈ ಪ್ರತಿಜ್ಞೆಯನ್ನು ಬೆಳೆಸಿಕೊಳ್ಳದಿದ್ದರೆ ಮುಂದಿನ ಪೀಳಿಗೆ ಹಿರಿಯರನ್ನೇ ಅನುಸರಿಸುವ ಸಾಧ್ಯತೆಗಳಿವೆ. ಶಾಸ್ತ್ರೀಯ ಭಾಷೆಯಾಗಿರುವ ಕನ್ನಡವನ್ನು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಬಳಸಿಕೊಳ್ಳುವಂತಾಗಬೇಕು’ ಎಂದರು.
ಪ್ರಾಧ್ಯಾಪಕ ಡಾ. ಮಾಧವ ಎಂ.ಕೆ., ಸಾಹಿತಿ ಶಕುಂತಲಾ ಭಟ್ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ್ ರೇವಣಕರ್ ಮಾತನಾಡಿ, ‘ತಾಲ್ಲೂಕಿನ ಎಲ್ಲ ಸಾಹಿತಿಗಳನ್ನು ಒಟ್ಟು ಸೇರಿಸಿ ಕನ್ನಡ ನಾಡು –ನುಡಿ ಬೆಳೆಸುವಲ್ಲಿ ಹೆಚ್ಚಿನ ಮುತುವರ್ಜಿವಹಿಸಲಾಗುವುದು’ ಎಂದರು. ಮುದ್ದು ಮೂಡುಬೆಳ್ಳೆ, ಡಾ. ಪಿ. ಅನಂತಕೃಷ್ಣ, ಬಂದಗದ್ದೆ ನಾಗರಾಜ್, ಡಾ. ಜ್ಯೋತಿ ಚೇಳ್ಯಾರ್, ಕೇಶವ ಕುಡ್ಲ ಅವರನ್ನು ಸನ್ಮಾನಿಸಲಾಯಿತು.
ರಾಜಶ್ರೀ ಶ್ರೀಕಾಂತ್ ಪ್ರಾರ್ಥಿಸಿದರು. ಕಾರ್ಯಕಾರಿಣಿ ಸದಸ್ಯ ಡಾ. ಚಂದ್ರಶೇಖರ ನಾವಡ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಿರುಮಲೇಶ್ವರ ಭಟ್, ಸುಬ್ರಾಯ ಭಟ್, ರಘು ಇಡ್ಕಿದು, ಸುಖಲಕ್ಷ್ಮಿ ಸುವರ್ಣ, ಡಾ. ಅರುಣಾ ನಾಗರಾಜ್ ಸನ್ಮಾನ ಪತ್ರ ವಾಚಿಸಿದರು. ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ವಂದಿಸಿದರು. ಕೆ.ಕೆ. ಪೇಜಾವರ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.