ಸುಬ್ರಹ್ಮಣ್ಯ: ಸೋರುವ ಕಟ್ಟಡ ಒಂದೆಡೆಯಾದರೆ, ಈ ಶಿಥಿಲಾವಸ್ಥೆಯ ಕಟ್ಟಡದಲ್ಲಿ ದಿನವೂ ಆತಂಕದಲ್ಲೇ ದಿನವೂ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿನ ಪೊಲೀಸರದ್ದಾಗಿದೆ.
ರಾಜ್ಯ ಪ್ರಸಿದ್ಧ ದೇವಾಲಯ ಇರುವ ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆ ದುಃಸ್ಥಿತಿಯಲ್ಲಿದೆ. ಸೋರುವ ಕಟ್ಟಡವನ್ನು ರಕ್ಷಿಸಲು ಚಾವಣಿಗೆ ಟಾರ್ಪಾಲ್ ಹೊದೆಸಲಾಗಿದೆ. ಕಡಬ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ 1969ರಲ್ಲಿ ಪೊಲೀಸ್ ಠಾಣೆ ತೆರೆಯಲಾಗಿತ್ತು. ಠಾಣೆಗೆ 52 ವರ್ಷಗಳ ಇತಿಹಾಸವಿದೆ. 15 ವರ್ಷಗಳವರೆಗೆ ಹೊರ ಠಾಣೆಯಾಗಿ ಕಾರ್ಯನಿರ್ವಹಿಸಿತ್ತು. ಶಿಸ್ತು ಪಾಲನೆಗೂ ಈ ಠಾಣೆ ಹೆಸರುವಾಸಿಯಾಗಿತ್ತು. ನಂತರ ಪೊಲೀಸ್ ಠಾಣೆಯಾಗಿ ಬದಲಾಗಿ ಕೆಲಸ ನಿರ್ವಹಿಸುತ್ತಿದೆ.
ಹೆಂಚಿನ ಮಾಡಿನ ಕಟ್ಟಡದಲ್ಲಿ ನಡುನಡುವೆ ನೀರು ಕೆಳಗಿಳಿಯುತ್ತದೆ. ಕೆಲವು ಕಡೆ ಹೆಂಚುಗಳು ತುಂಡಾಗಿ ಕೆಳಗೆ ಬೀಳುತ್ತವೆ. ಪೀಠೋಪಕರಣಗಳು ಜೀರ್ಣಗೊಂಡಿವೆ. ಮೂರು ಕೊಠಡಿಗಳಿವೆ. 2001ರಲ್ಲಿ ದಾನಿಗಳ ಸಹಕಾರದಿಂದ ಹೆಚ್ಚುವರಿ ಕೊಠಡಿ ನಿರ್ಮಿಸಲಾಗಿದೆ.
ಪ್ರಸ್ತುತ ಠಾಣೆಯಲ್ಲಿ 30 ಸಿಬ್ಬಂದಿ ಕರ್ತವ್ಯದಲ್ಲಿದ್ದು ಎಲ್ಲರಿಗೂ ಕುಳಿತುಕೊಳ್ಳುವಷ್ಟು ಜಾಗವಿಲ್ಲ. ಮೂರು ಎಕರೆ ಜಾಗದಲ್ಲಿರುವಠಾಣೆಗೆ ತುರ್ತಾಗಿ ಹೊಸ ಕಟ್ಟಡ ಬೇಕಾಗಿದೆ.
ಸುಬ್ರಹ್ಮಣ್ಯ, ಐನೆಕಿದು, ಏನೆಕಲ್, ಬಳ್ಪ, ಕೇನ್ಯ, ಕೂತ್ಕುಂಜ, ಐವತ್ತೊಕ್ಲು, ಪಂಬೆತ್ತಾಡಿ ,ಹರಿಹರ, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರ, ದೇವಚಳ್ಳ,ನಾಲ್ಕೂರು, ಗುತ್ತಿಗಾರು, ಸೇರಿದಂತೆ ಸುಮಾರು 15ಗ್ರಾಮಗಳು ಈ ಠಾಣಾ ವ್ಯಾಪ್ತಿಯಲ್ಲಿವೆ.