ಮುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪೆಪದವು ಚರ್ಚ್ ಕ್ರಾಸ್ ಬಳಿ ಬಾಡಿಗೆ ಮನೆಯಲ್ಲಿರುವ, ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿಗಳು ದುರ್ಗಾಕೊಡಿ ಕ್ರಾಸ್ ಬಳಿ ಮುಖ್ಯರಸ್ತೆ ಬದಿಯಲ್ಲಿ ಕಸ ಎಸೆದಿದ್ದರು. ಕಸದ ಮೂಟೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕಾಲೇಜಿಗೆ ಸಂಭಂದಪಟ್ಟ ಕಾಗದ ಪತ್ರಗಳು ಲಭಿಸಿತು. ಗ್ರಾ.ಪಂ. ಸಿಬ್ಬಂದಿ ಬಜಪೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳು ವಾಸವಿರುವ ಮನೆಗೆ ತೆರಳಿ ವಿಚಾರಣೆ ನಡೆಸಿದಾಗ ಕಸವನ್ನು ಎಸೆದಿರುವುದಾಗಿ ಒಪ್ಪಿಕೊಂಡರು. ಪೊಲೀಸರು ವಿದ್ಯಾರ್ಥಿಗಳನ್ನು ಮುತ್ತೂರು ಪಂಚಾಯಿತಿಗೆ ಕರೆಸಿ, ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಮತ್ತು ಅಭಿವೃದ್ಧಿ ಅಧಿಕಾರಿ ಪ್ರಮೋದ್ ಎಸ್. ನಾಯ್ಕ್ ಸಮ್ಮುಖದಲ್ಲಿ ₹5 ಸಾವಿರ ದಂಡ ವಿಧಿಸಿದರು. ನಂತರ ಮುಚ್ಚಳಿಕೆ ಬರೆಯಿಸಿಕೊಂಡು, ಕಸ ಸುರಿದ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿದ್ಯಾರ್ಥಿಗಳಿಂದಲೇ ಕಸ ತೆರವು ಮಾಡಿಸಿದರು.